
Sidlaghatta : ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಧರೆ ಫೌಂಡೇಶನ್ ಸಹಕಾರದೊಂದಿಗೆ ತಾಲ್ಲೂಕಿನ ಗೊರ್ಲಗುಮ್ಮನಹಳ್ಳಿ 11ನೇ ಮೈಲಿಯ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಪಾನಿನ ಮಿಯಾವಾಕಿ ಪದ್ಧತಿಯಲ್ಲಿ 3000 ಗಿಡಗಳನ್ನು ನೆಡಲಾಯಿತು.
ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಮಾತನಾಡಿ, “ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಣ್ಣು ಅಷ್ಟು ಚೆನ್ನಾಗಿರದ ಕಾರಣ ನೆಟ್ಟ ಗಿಡಗಳು ಬೆಳೆಯುತ್ತಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದರು. ಅದಕ್ಕಾಗಿ ಆಳವಾಗಿ ಗುಂಡಿಗಳನ್ನು ತೆಗೆದು ಸೂಕ್ತ ಗೊಬ್ಬರ ಹಾಕಿ, ಮಿಯಾವಾಕಿ ಪದ್ಧತಿಯಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಕಡಿಮೆ ಜಾಗದಲ್ಲಿ ಸ್ಥಳೀಯ ಗಿಡಗಳನ್ನು ದಟ್ಟವಾಗಿ ನೆಡುವುದರಿಂದ ತ್ವರಿತ ಬೆಳವಣಿಗೆ ಮತ್ತು ದಟ್ಟತೆ ಸಾಧ್ಯವಾಗುತ್ತದೆ. ಮಿಯಾವಾಕಿ ಪದ್ಧತಿ ಜೈವಿಕ ವೈವಿಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಪಕ್ಷಿ, ದುಂಬಿ, ಚಿಟ್ಟೆ, ಇರುವೆಗಳಂತಹ ಸಾವಿರಾರು ಜೀವಿಗಳಿಗೆ ಆಶ್ರಯ ಮತ್ತು ಆಹಾರ ನೀಡುತ್ತದೆ. ಇಲ್ಲಿರುವ ವಿದ್ಯಾರ್ಥಿಗಳಿಗೂ ಉತ್ತಮ ಹಸಿರು ಪರಿಸರ ಸಿಗಲಿದೆ. ನೆಟ್ಟ ಗಿಡಗಳನ್ನು ಎರಡು ವರ್ಷ ಕಾಲವಾದರೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೋಷಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ” ಎಂದು ಹೇಳಿದರು.
ಪ್ರಾಂಶುಪಾಲ ನಾರಾಯಣಸ್ವಾಮಿ ಮಾತನಾಡಿ, “ಗ್ರಾಮ ಪಂಚಾಯಿತಿಯವರ ನೆರವಿನೊಂದಿಗೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜೊತೆಗೂಡಿ ಗಿಡಗಳನ್ನು ನೀರು ಹಾಕಿ ಪೋಷಿಸುತ್ತೇವೆ” ಎಂದು ಹೇಳಿದರು.
ರೈತ ಸಂಘದ ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ಧರೆ ಫೌಂಡೇಶನ್ ನ ಪ್ರಸನ್ನ, ವಕೀಲರಾದ ಶ್ರೀನಿವಾಸ್, ಲಕ್ಷ್ಮೀನರಸಿಂಹ, ಉಪನ್ಯಾಸಕರಾದ ಕುಮಾರ್, ಸೌಭಾಗ್ಯ, ಸ್ವಪ್ನ, ಪ್ರಮೀಳ, ಅಶೋಕ, ರವಿ, ಭೂಲಕ್ಷ್ಮೀದೇವಿ ಹಾಜರಿದ್ದರು.