
Sidlaghatta : ವೈಯಕ್ತಿಕ ಸ್ವಚ್ಛತೆ ಹಾಗೂ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಮಾತ್ರ ನಾವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಕಾರ್ಯ ಅನನ್ಯವಾದುದು ಎಂದು BJP ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಬಿಜೆಪಿಯಿಂದ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಛತೆ ವಿಷಯ ಬಂದಾಗ ನಾವು ನಿದ್ದಯಿಂದ ಏಳುವುದಕ್ಕೂ ಮೊದಲೆ ಎದ್ದು ಇಡೀ ನಗರದಲ್ಲಿ ಕಸ ಕಡ್ಡಿ ತೆಗೆದು ಸ್ವಚ್ಛತೆ ಮಾಡುತ್ತಾರೆ. ಅವರ ಮನೆಯಲ್ಲಿ ಅವರು ಸ್ವಚ್ಛತೆಯನ್ನು ಮಾಡಿಕೊಳ್ಳದಿದ್ದರೂ ನನ್ನ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಅವರ ಸೇವೆಗೆ ನಾವು ಬೆಲೆ ಕಟ್ಟಲು ಆಗುವುದಿಲ್ಲ.
ಅವರಿಂದಲೆ ನಾವು ನಮ್ಮ ಮಕ್ಕಳು ಕುಟುಂಬದವರು ಆರೋಗ್ಯದಿಂದ ಇದ್ದೇವೆ ಎಂದರೆ ಅದು ಪೌರಕಾರ್ಮಿಕರ ಕಾರ್ಯದಿಂದಲೆ ಎಂದರೂ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಪೌರಕಾರ್ಮಿಕರಿಗೆ ಇಲ್ಲಿ ಪ್ರತಿ ತಿಂಗಳೂ ಸಕಾಲಕ್ಕೆ ಸಂಬಳ ಸಿಗುತ್ತಿಲ್ಲ, ನಗರಸಭೆಗೆ ಆದಾಯದ ಕೊರತೆಯಿಂದ ಪೌರಕಾರ್ಮಿಕರಿಗೆ ಕಾಲ ಕಾಲಕ್ಕೆ ಸಂಬಳ ಸಿಗದಿದ್ದರೂ ಪೌರಕಾರ್ಮಿಕರು ಮಾತ್ರ ಎಂದಿಗೂ ತಮ್ಮ ಕೆಲಸವನ್ನು ನಿಲ್ಲಿಸಿಲ್ಲ. ಹಾಗಾಗಿ ಅವರ ಸೇವೆಯನ್ನು ನಾವೆಲ್ಲರೂ ಗುರ್ತಿಸುವಂತಾಗಬೇಕು ಎಂದರು.
ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಪೌರಕಾರ್ಮಿಕರ ಸೇವಾ ಭದ್ರತೆಯನ್ನು ಒದಗಿಸುವುದು ಮತ್ತು ಇತರೆ ಮೂಲ ಸವಲತ್ತುಗಳನ್ನು ಹೆಚ್ಚಿಸುವ ಕೆಲಸ ನಮ್ಮ ಪಕ್ಷದಿಂದ ಖಂಡಿತಾ ಆಗಲಿದೆ ಎಂದು ಭರವಸೆ ನೀಡಿದರು.
ನಮ್ಮ ಪಕ್ಷದ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಪೌರಕಾರ್ಮಿಕರಿಗೆ ಬಹಳ ಗೌರವ ನೀಡುತ್ತಾರೆ. ಪೌರ ಕಾರ್ಮಿಕರ ಎಲ್ಲ ಕಷ್ಟ ಕಾರ್ಪಣ್ಯಗಳು ಅವರಿಗೆ ಗೊತ್ತಿದೆ. ಆ ಕಾರಣಕ್ಕೆ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲೂ ಈ ದಿನ ಸ್ವಚ್ಛತಾ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಡಾ.ಸತ್ಯನಾರಾಯಣರಾವ್ ಸೇರಿದಂತೆ ಬಿಜೆಪಿಯ ಮುಖಂಡರು ಹಾಜರಿದ್ದರು.