
Sidlaghatta : ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮೂರು ದಿನಗಳ ಕ್ರೀಡಾಕೂಟಕ್ಕೆ ಸೋಮವಾರ ತಹಶೀಲ್ದಾರ್ ಗಗನಸಿಂಧು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಕ್ರೀಡೆಯನ್ನು ಕೇವಲ ಸ್ಪರ್ಧೆಯಾಗಿ ನೋಡದೆ ವ್ಯಕ್ತಿತ್ವ ವಿಕಸನದ ಸಾಧನವಾಗಿ ಪರಿಗಣಿಸಬೇಕು. ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
“ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಯೂ ಸಾಕಷ್ಟು ಪ್ರತಿಭೆ ಅಡಗಿದೆ. ಇಂತಹ ಕ್ರೀಡಾಕೂಟಗಳು ಆ ಪ್ರತಿಭೆಯನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಉತ್ತಮ ವೇದಿಕೆಯಾಗಿವೆ” ಎಂದರು.
ಕ್ರೀಡಾಕೂಟದ ವೇಳಾಪಟ್ಟಿ ಏನು?
ನಿಕಟಪೂರ್ವ ಉಪನಿರ್ದೇಶಕ ಆದಿಶೇಷರಾವ್ ಮಾತನಾಡಿ, ಕ್ರೀಡಾಕೂಟವು ಮೂರು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
- ಮೊದಲ ದಿನ: 18 ಅಥ್ಲೆಟಿಕ್ಸ್ ಸ್ಪರ್ಧೆಗಳು
- ಎರಡನೇ ದಿನ: ಬಿ.ಜಿ.ಎಸ್. ಶಾಲೆಯಲ್ಲಿ ಖೋ-ಖೋ, ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿಗಳು
- ಮೂರನೇ ದಿನ: ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ವಾಲಿಬಾಲ್, ಹ್ಯಾಂಡ್ಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಹಾಗೂ ಭಾರತೀಯ ಸೇನೆಯ ಹವಾಲ್ದಾರ್ ಅಜ್ಮತ್ ಉಲ್ಲಾ, ಡಾಲ್ಫಿನ್ ಪಿಯು ಕಾಲೇಜಿನ ಪ್ರಾಂಶುಪಾಲ ಎನ್. ಶ್ರೀನಿವಾಸಮೂರ್ತಿ ಹಾಗೂ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
In English: Tahsildar Gaganasindhu inaugurated a three-day sports meet for Sidlaghatta taluk’s PU college students at Nehru Stadium on Monday. Day one featured 18 athletics events; day two has kho-kho, kabaddi and throwball at BGS School; day three has volleyball, handball and shuttle badminton at Dolphin Educational Institution. Former deputy director Adisheshrao and college principals attended.
ಇದೇ ಮಾದರಿಯ ಕ್ರೀಡಾ ಸುದ್ದಿಗಾಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಕುರಿತ ವರದಿ ವೀಕ್ಷಿಸಿ.












