ಮಳೆಯ ನೀರು ತುಂಬಿಕೊಂಡು ಜನಸಂಚಾರಕ್ಕೆ ತೊಂದರೆಯಾಗಿದ್ದ ಇದ್ಲೂಡು ರಸ್ತೆಯ ಬಳಿಯ ರೈಲ್ವೆ ಅಂಡರಪಾಸ್ ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಭಾನುವಾರ ಮುಂಜಾನೆ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿನಗರ ಹಾಗೂ ಇದ್ಲೂಡು ಮಾರ್ಗ ಸಂಚರಿಸುವ ಸಾವಿರಾರು ವಾಹನಗಳಿಗೆ ಯಮನಂತೆ ಕಾಡುತ್ತಿದೆ ರೈಲ್ವೆ ಅಂಡರ್ ಪಾಸ್. ಅಧಿಕಾರಿಗಳು ಬದಲಾವಣೆ ಆಗ್ತಾರೆ ಹೊರತು ಅಂಡರ್ ಪಾಸ್ ದುಸ್ಥಿತಿ ಬದಲಾವಣೆಯಾಗುವುದಿಲ್ಲ. ಆರು ವರ್ಷಗಳಿಂದ ಸತತ ಹೋರಾಟ ಮಾಡಿ ಪ್ರತಿ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಿದ್ದೇವೆ. ಇದುವರೆಗೂ ಅದರ ಬಗ್ಗೆ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು ಕಂಡು ಕಾಣದಂತೆ ರೈತರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಮಳೆ ಬಂದರೆ ಕೆರೆಯ ರೀತಿಯಲ್ಲಿ ಅಂಡರ್ ಪಾಸ್ ತುಂಬುತ್ತದೆ. ಸಾವಿರಾರು ರೈತರು ಅಂಡರ್ ಪಾಸ್ ಮಾರ್ಗದಿಂದ ಹೋಗಬೇಕು. ಬೆಳೆಯುವ ಬೆಳೆಗಳನ್ನು ರೇಷ್ಮೆಯನ್ನು ಹೊತ್ತು ರೈತರು ಬೇರೆ ರಸ್ತೆ ಇಲ್ಲದೆ ಅಂಡರ್ ಪಾಸ್ ಮೂಲಕವೇ ಹಾದು ಹೋಗಬೇಕು. ಅವೈಜ್ಞಾನಿಕವಾಗಿ ನಿರ್ಮಿಸಿದ ಅಂಡರ್ ಪಾಸ್ ನೊಳಗೆ ಸಂಚರಿಸಬೇಕೆಂದರೆ ಬೆಳೆದೆ ಬೆಳೆಗಳನ್ನು ಹೊತ್ತು ಸಾಗುವಾಗ ಸ್ವಲ್ವ ಎಡವಿದರೆ ನೀರಿನ ಪಾಲಾಗುತ್ತದೆ. ರೈತರು ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರ ಘಟಕ ಅಧ್ಯಕ್ಷ ಬಿ.ನಾರಾಯಣಸ್ವಾಮಿ ನಗರಸಭೆ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದರು.
ರೈತರು ಹಗಲು ರಾತ್ರಿ ಎನ್ನದೇ ಸಾಲ ಮಾಡಿ ಬೆಳೆ ಬೆಳೆದು ನೀರಿಗೆ ಹಾಕಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ನಮ್ಮ ನಷ್ಟಕ್ಕೆ ಯಾರು ಪರಿಹಾರ ನೀಡುವರು. ನೀರಿನಲ್ಲಿ ಹೋಗುವಾಗ ಎಷ್ಟೋ ವಾಹನ ಕೆಟ್ಟಿದೆ, ಅವೈಜ್ಞಾನಿಕ ಕಾಮಾಗಾರಿಯಿಂದ ಕಂಬಿಗಳು ಚುಚ್ಚಿ ಆಸ್ಪತ್ರೆಗೆ ಹೋಗಿದ್ದೇವೆ, ಕೈ ಕಾಲು ಮುರಿದು ನೋವನ್ನು ಅನುಭವಿಸಿದ್ದೇವೆ. ಇನ್ನೇನು ಪ್ರಾಣಗಳು ಹೋದರೆ ಏನಾದರು ಸರಿ ಮಾಡುತ್ತಾರೋ ನೋಡಬೇಕಾಗಿದೆ ಎಂದು ರೈತ ಸಂಘದ ಖಜಾಂಚಿ ಪಿ.ವಿ. ದೇವರಾಜ್ ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರಸ್ತೆಯ ಮಧ್ಯದಲ್ಲಿ ಕುಳಿತುಕೊಂಡು ನೀವು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೀರಿ ಎಂದು ಹೇಳಿದಾಗ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೈತರ ನೋವನ್ನು ಆಲಿಸಿದರು. ನಂತರ ನಗರಸಭೆಯ ಸಿಬ್ಬಂದಿ ಆಗಮಿಸಿ ನೀರು ಹೊರ ಹೋಗಲು ವ್ಯವಸ್ಥೆ ಮಾಡಿ, ನಿಂತಿದ್ದ ನೀರನ್ನು ಖಾಲಿ ಮಾಡಿ ಜನರು ಓಡಾಡಲು ಅನುವು ಮಾಡಿಕೊಟ್ಟರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರ ಘಟಕದ ಉಪಾಧ್ಯಕ್ಷ ರಾಮಕೃಷ್ಣಪ್ಪ, ದೇವರಾಜ್, ಪದಾಧಿಕಾರಿಗಳಾದ ಹರೀಶ್, ಆರ್ ಮಂಜುನಾಥ್, ಸೋಣ್ಣಪ್ಪ ರೆಡ್ಡಿ, ಅಂಗಡಿ ವೆಂಕಟೇಶ್, ಮಂಜುನಾಥ್, ರಾಜಣ್ಣ, ಸುಮಂತ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi