ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ತಾಲ್ಲೂಕು ಆಡಳಿತದಿಂದ ಸರಳವಾಗಿ ಆಚರಿಸಿದ ಶ್ರೀಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ರಾಜೀವ್, ಮನುಕುಲಕ್ಕೆ ಅತ್ಯುನ್ನತ ಜ್ಞಾನವನ್ನು ಹಂಚಿದವರು ಶ್ರೀಶಂಕರಾಚಾರ್ಯರು. ಅಧ್ಯಾತ್ಮದ ಶಕ್ತಿಯನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ಮಾಡಿದ ಶ್ರೀಶಂಕರಾಚಾರ್ಯರು ಅಸಂಖ್ಯ ಜನರ ಆಂತರ್ಯದ ಅಂಧಕಾರವನ್ನು ಕಳೆದರು ಎಂದು ತಿಳಿಸಿದರು.
ಪ್ರಾಚೀನ ಕಾಲದಲ್ಲಿ ಪ್ರಯಾಣ ಎಂಬುದು ಕಷ್ಟಕರವಾಗಿತ್ತು. ಆ ಪರಿಸ್ಥಿತಿಯಲ್ಲಿಯೂ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ಪ್ರಸ್ತುತ ಸಮಯದಲ್ಲಿ ಶ್ರೀಶಂಕರಾಚಾರ್ಯರು ಹೇಳಿರುವ ವಿದ್ಯೆ ಮತ್ತು ಅವಿದ್ಯೆಯ ಅರ್ಥವನ್ನು ಅರ್ಥೈಸಿಕೊಳ್ಳುವುದು ಮುಖ್ಯ. ಕೊರೊನಾ ಭೀತಿಯಲ್ಲಿ ದೇಶವೇ ನಡುಗಿದೆ. ಹೀಗಿರುವಾಗ ದ್ವೇಷ ಅಸೂಯೆಗಳನ್ನು ಬಿಟ್ಟು ವೈರಸ್ ವಿರುದ್ಧವಾಗಿ ಹೋರಾಡಲು ಎಲ್ಲರೂ ಒಂದಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೆದಾರ್ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ತಾಲ್ಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.