ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತು, ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಜಂಟಿಯಾಗಿ ಶರಣಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವಿಜಯಪುರದ ಗಂಗಾತಾಯಿ ದೇವಾಲಯದ ಆವರಣದಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಚನದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕಳೆದ 25 ವರ್ಷಗಳಿಂದ ಎಚ್.ಎಸ್.ರುದ್ರೇಶಮೂರ್ತಿ ಅವರು ಶರಣಸಾಹಿತ್ಯ ಚಿಂತನೆಯಲ್ಲಿ ತೊಡಗಿದ್ದು, ನಿರಂತರವಾಗಿ ಶರಣರ ಆದರ್ಶಗಳು, ವಚನಸಾಹಿತ್ಯದಲ್ಲಿನ ಮೌಲ್ಯಗಳ ಕುರಿತು 150 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದು, ಶರಣಸಾಹಿತ್ಯ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ಮಾರ್ಚ್ನಿಂದೀಚೆಗೆ ಕೊರೋನಾ ಕುರಿತ ಜಾಗೃತಿ, ಆನ್ಲೈನ್ ತರಬೇತಿಗಳಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ಅಗತ್ಯವಿರುವವರಿಗೆ ದಿನಸಿ ಮತ್ತು ಔಷಧಿಕಿಟ್ಗಳ ವಿತರಣೆ, ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳು, ಉಚಿತ ಮಾಸ್ಕ್ ಗಳ ವಿತರಣೆ, ಮಕ್ಕಳಿಗಾಗಿ ರಜಾಕಾಲದಲ್ಲಿ ಉಚಿತ ಗಾಂಧಿಪುಸ್ತಕಗಳ ಹಂಚಿಕೆ ಮತ್ತು ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಬಹುಮಾನಗಳ ಗೆಲ್ಲಬಲ್ಲ ವಿವಿಧ ಸ್ಪರ್ಧೆಗಳ ಆಯೋಜನೆ, ಮಹಾತ್ಮಗಾಂಧಿ ನ್ಯಾಶನಲ್ ಕೌನ್ಸಿಲ್ ಆಫ್ ರೂರಲ್ ಎಜುಕೇಶನ್, ರಾಜ್ಯ ಎನ್.ಎಸ್.ಎಸ್ ಕೋಶಗಳ ವತಿಯಿಂದ ನಡೆದ ಸ್ವಚ್ಚತಾ ಕ್ರಿಯಾಯೋಜನೆ ಕಾರ್ಯಾಗಾರ, ಸ್ಪಿಟ್ ಫ್ರೀ ಇಂಡಿಯಾ ಮೂವ್ಮೆಂಟ್ನಲ್ಲಿ ಪಾಲ್ಗೊಳ್ಳುವಿಕೆಯಂತಹ ವಿವಿಧ ಸೃಜನಾತ್ಮಕಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಅವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಬಿಹಾರ ರಾಜ್ಯ ಕಾಶಿಪುರ ಜಿಲ್ಲಾ ಸಮಷ್ಟಿಪುರದ ಪ್ರಗತಿ ಆದರ್ಶ್ ಸೇವಾಕೇಂದ್ರವು ಇಂಡಿಯನ್ ಕೊರೊನಾ ವಾರಿಯರ್ಸ್ ಪ್ರಶಸ್ತಿ ನೀಡಿ ಗೌರವಿಸಿತ್ತು.