ಗ್ರಾಮದ ದಲಿತರ ಹಾಗೂ ಸಾರ್ವಜನಿಕರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಿರುವ ಪ್ರಭಾವಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಸ್ತೆಯನ್ನು ಸಾರ್ವಜನಿಕರ ಓಡಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಕದಸಂಸ ಪದಾಧಿಕಾರಿಗಳು ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಶೀಗೆಹಳ್ಳಿ ಗ್ರಾಮದಲ್ಲಿ ದಲಿತರು ಹಾಗೂ ಸಾರ್ವಜನಿಕರ ಜಮೀನುಗಳಿಗೆ ಹಾದು ಹೋಗಲು ಸುಮಾರು 70 ವರ್ಷಗಳಿಂದ ಇರುವ ರಸ್ತೆಯನ್ನು ಗ್ರಾಮದ ನಾರಾಯಣಸ್ವಾಮಿ ಎಂಬುವವರು ಮುಚ್ಚಿ ಸಾರ್ವಜನಿಕರು ಓಡಾಡದಂತೆ ತಡೆದಿದ್ದಾಗ ಸ್ಥಳಕ್ಕೆ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಭೇಟಿ ಮಾಡಿ ಜನರು ಓಡಾಡಲು ರಸ್ತೆಯನ್ನು ಬಿಡಿಸಿ ಅನುವು ಮಾಡಿಕೊಟ್ಟಿದ್ದರು. ಆದರೆ ಪುನಃ ಇದೀಗ ಅದೇ ವ್ಯಕ್ತಿ ರಸ್ತೆಯನ್ನು ಮುಚ್ಚುವ ಮೂಲಕ ತಾಲ್ಲೂಕು ದಂಡಾಧಿಕಾರಿಗಳ ಆದೇಶವನ್ನು ದಿಕ್ಕರಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವುದು ಹಾಗೂ ಮುಚ್ಚಿರುವ ರಸ್ತೆಯನ್ನು ಸಾರ್ವಜನಿಕರ ಓಡಾಡಲು ಬಿಡಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕದಸಂಸ ಸಂಚಾಲಕ ಕೆ.ಎಸ್.ಅರುಣ್ಕುಮಾರ್, ತಾಲ್ಲೂಕು ಸಂಘಟನಾ ಸಂಚಾಲಕ ಚಂದ್ರಶೇಖರ್, ನಗರ ಘಟಕದ ಸಂಚಾಲಕರಾದ ಜೆ.ಎನ್.ಪ್ರಶಾಂತ್, ಎಂ.ಮುನಿಕೃಷ್ಣ, ಮಧುಕುಮಾರ್, ಮಂಜುನಾಥ್ ಹಾಜರಿದ್ದರು.