Abludu, Sidlagatta : ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಕೇಂದ್ರದ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಆಯೋಜಿಸಲಾಗಿದ್ದ 15 ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಸಮಾರೋಪ ಸಮಾರಂಭದೊಂದಿಗೆ ವರ್ಣರಂಜಿತವಾಗಿ ಮುಕ್ತಾಯಗೊಂಡಿತು.
ನಗರ ಪ್ರದೇಶದ ಮಕ್ಕಳಿಗೆ ದೊರಕುವ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೂ ಸಿಗಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಶಿಬಿರದಲ್ಲಿ ಮಕ್ಕಳಿಗೆ ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳ ಸಮತೋಲಿತ ಮಿಶ್ರಣ ನೀಡಲಾಯಿತು. ಪತ್ರಿಕೆ ಓದುವುದು, ಕಥೆ ಹೇಳುವುದು, ಪತ್ರ ಬರೆಯುವುದು ಮತ್ತು ಕವನ ರಚನೆಯಂತಹ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಚೆಸ್, ಕೇರಂ, ವಾಲಿಬಾಲ್ ಮತ್ತು ಕ್ರಿಕೆಟ್ನಂತಹ ಕ್ರೀಡೆಗಳಲ್ಲಿ ಮಕ್ಕಳು ಪಾಲ್ಗೊಂಡರು.
ಗಣಿತದ ಘನಾಕೃತಿಗಳ ಪರಿಚಯ, ಅಂಕಿ-ಸಂಖ್ಯೆ ಕೌಶಲ ಅಭಿವೃದ್ಧಿ ಹಾಗೂ ವಿಜ್ಞಾನದ ಪ್ರಯೋಗಗಳ ಮೂಲಕ ಮಕ್ಕಳ ತಾರ್ಕಿಕ ಚಿಂತನೆಗೆ ಒತ್ತು ನೀಡಲಾಯಿತು. ಇದರೊಂದಿಗೆ ಕರಕುಶಲ ಕಲೆ, ಪೇಪರ್ ಕಟಿಂಗ್, ಮಿಮಿಕ್ರಿ, ನೃತ್ಯ ಮತ್ತು ಮ್ಯೂಸಿಕಲ್ ಚೇರ್ನಂತಹ ಚಟುವಟಿಕೆಗಳು ಮಕ್ಕಳ ಸೃಜನಾತ್ಮಕತೆಯನ್ನು ಹೊರಹೊಮ್ಮಿಸಿದವು. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಸಹಾಯಕಿಯರು ಮಕ್ಕಳಿಗೆ ಪೌಷ್ಟಿಕ ಆಹಾರದ ಮಹತ್ವ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪಿಡಿಒ ಮಮತ, “ಗ್ರಾಮೀಣ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ದಾರಿ ದೀಪ. ಮಕ್ಕಳು ಶಿಬಿರದಲ್ಲಿ ತಾವು ತಯಾರಿಸಿದ ಆಟಿಕೆಗಳು, ಕಲಾಕೃತಿಗಳು ಮತ್ತು ಪೇಪರ್ ಕ್ರಾಫ್ಟ್ ವಸ್ತುಗಳನ್ನು ಪ್ರದರ್ಶಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ತಾವು ಕಲಿತ ವಿಷಯಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಮಂಜುನಾಥ್, ಗ್ರಂಥಪಾಲಕ ಎಂ.ಜಿ. ಮುನಿನರಸಿಂಹ, ಮುಖ್ಯಶಿಕ್ಷಕಿ ಬಿ. ಮಂಜುಳಮ್ಮ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವೀಣಾ, ಸಿ.ಎ. ದ್ಯಾವಪ್ಪ, ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆ ಅನುಷಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








