Home News ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣೆ

ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣೆ

0
Sidlaghatta Ancient Temples Visit Hobby

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಆತ್ಮಾರಾಮ, ಸೋಮೇಶ್ವರ ಮತ್ತು ಮಳ್ಳೂರಮ್ಮ ದೇವಾಲಯಗಳಿಗೆ ಭಾನುವಾರ ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಸದಸ್ಯರೊಂದಿಗೆ ಭೇಟಿ ನೀಡಿ, ಸ್ಥಳ ಪುರಾಣ, ಇತಿಹಾಸವನ್ನು ಗ್ರಾಮಸ್ಥರಿಂದ ಕೇಳಿ ತಿಳಿದು ಬಳಗದ ಅಧ್ಯಕ್ಷ ಗಣಪತಿ ಎಂ.ಭಟ್ ಮಾತನಾಡಿದರು.

ನಮ್ಮ ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಾಚೀನ ದೇವಾಲಯಗಳಿವೆ. ನಮ್ಮ ಪೂರ್ವಿಕರು ಅತ್ಯಂತ ಸುಂದರವಾದ, ಕಲಾತ್ಮಕವಾದ ದೇವಸ್ಥಾನಗಳನ್ನು ಕಟ್ಟಿದ್ದಾರೆ. ನಮಗೆ ಆ ರೀತಿಯ ದೇವಸ್ಥಾನಗಳನ್ನು ಪುನರ್ ನಿರ್ಮಿಸಲು ಆಗುವುದಿಲ್ಲ. ಅವುಗಳನ್ನು ದರ್ಶಿಸಿ, ಛಾಯಾಚಿತ್ರಗಳ ತೆಗೆದು ಅದನ್ನು ಹಲವೆಡೆ ಪ್ರದರ್ಶಿಸುವುದು ನಮ್ಮ ಹವ್ಯಾಸ. ಈ ಹವ್ಯಾಸದ ಉದ್ದೇಶ ನಮ್ಮ ಪರಂಪರೆ, ಇತಿಹಾಸ, ಶಿಲ್ಪಕಲೆ, ಧಾರ್ಮಿಕ ಸದಭಿರುಚಿಗಳನ್ನು ಎಲ್ಲರಿಗೂ ತಿಳಿಸುವುದು ಮತ್ತು ಪ್ರಾಚೀನ ದೇವಸ್ಥಾನಗಳನ್ನು ಸಂರಕ್ಷಿಸುವುದಾಗಿದೆ ಎಂದು ತಿಳಿಸಿದರು.

 ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಕಾರ್ಯದರ್ಶಿ ಕೆಂಗೇರಿ ಚಕ್ರಪಾಣಿ ಮಾತನಾಡಿ, ನಾವು ಇದುವರೆಗೂ 285 ಸ್ಥಳಗಳಿಗೆ ಭೇಟಿ ನೀಡಿದ್ದು, 500 ಕ್ಕೂ ಹೆಚ್ಚು ದೇವಸ್ಥಾನಗಳನ್ನು ದರ್ಶಿಸಿದ್ದೇವೆ. ಪ್ರತಿಯೊಂದು ದೇವಸ್ಥಾನದ ಛಾಯಾಚಿತ್ರಗಳು, ಇತಿಹಾಸ, ವಿಶೇಷತೆ, ಐತಿಹ್ಯಗಳನ್ನು ದಾಖಲಿಸಿದ್ದೇವೆ. ನಮ್ಮ ಪ್ರವಾಸದಲ್ಲಿ ನೂರಾರು ಮಂದಿ ಜೊತೆಗೂಡುತ್ತಾರೆ. ಈ ದಿನದ ನಮ್ಮ ಪ್ರವಾಸವು 44 ನೆಯದಾಗಿದೆ. ಬೊಮ್ಮವಾರದ ಸುಂದರೇಶ್ವರ ದೇವಾಲಯ, ವೀರಾಪುರದ ವಿನಾಯಕ ದೇವಾಲಯ, ದೇವರಮಳ್ಳೂರಿನಲ್ಲಿ ಆತ್ಮಾರಾಮ, ಸೋಮೇಶ್ವರ ಮತ್ತು ಮಳ್ಳೂರಮ್ಮ ದೇವಾಲಯಗಳು, ಯಗವಕೋಟೆಯ ವೀರನಾರಾಯಣ ದೇವಾಲಯ, ಆಲಂಬಗಿರಿಯ ಲಕ್ಷ್ಮೀವೆಂಕಟರಮಣ ದೇವಾಲಯ, ವಿಜಯಪುರದ ಓಂಕಾರೇಶ್ವರ, ನಗರೇಶ್ವರ, ಸೋಮೇಶ್ವರ, ಚನ್ನಕೇಶವ, ಶ್ರೀರಾಮ ದೇವಾಲಗಳಿಗೆ ಭೇಟಿ ನೀಡಲಿದ್ದೇವೆ ಎಂದು ಹೇಳಿದರು.

 ದೇವರಮಳ್ಳೂರಿನ ಆತ್ಮಾರಾಮ ದೇವಾಲಯ ವಿಶೇಷವಾದದ್ದು. ಚೋಳರ ಮತ್ತು ಪಲ್ಲವರ ಕಾಲದ ಈ ಪುರಾತನ ದೇವಾಲಯದ ಗರ್ಭಗುಡಿಯಲ್ಲಿರುವ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮರ ವಿಗ್ರಹಗಳು ಆಧ್ಯಾತ್ಮ ರಾಮಾಯಣದ ಸ್ವರೂಪದಲ್ಲಿದೆ. ಜೀವಾತ್ಮ – ಪರಮಾತ್ಮರ ಬೆಸುಗೆ ಸೂಚಿಸುವ ಚಿನ್ಮುದ್ರೆಯಲ್ಲಿರುವ ರಾಮನ ಅಪರೂಪದ ವಿಗ್ರಹದ ಮುಂದೆ ಒಂದು ಕೈಲಿ ಏಕತಾರಿ ಮತ್ತೊಂದು ಕೈಲಿ ಚಿಟಿಕೆಯನ್ನು ಹಿಡಿದು ಆಂಜನೇಯ ಗಮಕ ಹಾಡುವ ಅಪರೂಪದ ಶಿಲ್ಪಗಳು ಇಲ್ಲಿವೆ. ಅದೇ ರೀತಿ ಮಳ್ಳೂರಮ್ಮ ಮತ್ತು ಸೋಮೇಶ್ವರ ದೇವಸ್ಥಾನಗಳು ಸಹ ವಿಶೇಷವಾದ ದೇವಾಲಯಗಳು ಎಂದು ಅವರು ಹೇಳಿದರು.

 ಈ ಸಂದರ್ಭದಲ್ಲಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕೋಬರಾವ್ ಅವರನ್ನು ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಸದಸ್ಯರು ಸನ್ಮಾನಿಸಿದರು.

 ಹಿರಿಯ ವಕೀಲರಾದ ಸುಬ್ರಮಣ್ಯಪ್ಪ, ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಮುನಿರಾಜು, ಗ್ರಾಮದ ಸೊಣ್ಣಪ್ಪ, ಬಚ್ಚಪ್ಪ, ರೆಡ್ಡಿಸ್ವಾಮಿ, ವೇಣುಗೋಪಾಲ್, ಬೈರಪ್ಪ, ಬಿ.ಎಲ್.ಮುನಿರಾಜು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version