
ಶಿಡ್ಲಘಟ್ಟ ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ದೇಶವನ್ನು ಭೌಗೋಳಿಕವಾಗಿ ಸಂರಕ್ಷಣೆ ಮಾಡುವುದು ಮತ್ತು ದೇಶದ ಜನರಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆಳೆಸುವ ದೃಷ್ಠಿಯಿಂದ ಸ್ಥಾಪಿಸಿದ ಜನಸಂಘ ನಂತರದ ದಿನಗಳಲ್ಲಿ ಭಾರತೀಯ ಜನತಾ ಪಕ್ಷವಾಗಿ ಇದೀಗ ದೇಶಾದ್ಯಂತ ವಿಸ್ತರಿಸಿದೆ ಎಂದರೆ ಅದಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರ ಪರಿಶ್ರಮವೇ ಕಾರಣ ಎಂದು ಅವರು ಹೇಳಿದರು.
1980 ರ ಏಪ್ರಿಲ್ಲ 6 ರಂದು ಸ್ಥಾಪನೆಯಾದ ಭಾರತೀಯ ಜನತಾಪಕ್ಷವು ಇಂದು ಕೇಂದ್ರ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದರೆ ಇದಕ್ಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ಕಾರಣರಾಗಿದ್ದಾರೆ. ಇಡೀ ವಿಶ್ವವೇ ನಮ್ಮ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿಯಂತಹ ಮಹಾ ನಾಯಕರನ್ನು ಸೃಷ್ಠಿಸಿದ ಶಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇದೆ ಎಂದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಕಳೆದ 42 ವರ್ಷಗಳ ಹಿಂದೆ ಕೇವಲ ಒಂದಿಬ್ಬರಿಂದ ಆರಂಭಗೊಂಡ ಬಿಜೆಪಿ ಪಕ್ಷ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು ಪಕ್ಷವನ್ನು ಮತ್ತಷ್ಟು ಬಲಶಾಲಿ ಹಾಗೂ ಶಕ್ತಿಯುತವಾಗಿ ಮಾಡುವಲ್ಲಿ ಯುವಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತಷ್ಟು ಶ್ರಮಿಸಬೇಕು ಎಂದರು.
ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ ಮಾತನಾಡಿ, ಮುಂಬರುವ ವಿದಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು. ಹಾಲಿ ಶಾಸಕ ವಿ.ಮುನಿಯಪ್ಪ ಕ್ಷೇತ್ರದಿಂದ ಹಲವಾರು ಭಾರಿ ಶಾಸಕರಾಗಿದ್ದು ತಮ್ಮ ವೈಯಕ್ತಿಕ ಅಭಿವೃದ್ದಿ (ಶಾಲೆ, ಇಂಜಿನಿಯರಿಂಗ್ ಕಾಲೇಜ್) ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆಯೇ ಹೊರತು ಅವರು ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಜನೀಕಾಂತ್ ಬಾಬು, ಶ್ರೀಧರ್, ಡಿ.ಎನ್.ದೇವರಾಜ್, ನರ್ಮದಾರೆಡ್ಡಿ, ಮಂಜುಳಮ್ಮ ಹಾಜರಿದ್ದರು.