Sidlaghatta : ಶಿಡ್ಲಘಟ್ಟ ನಗರದ BJP ಸೇವಾಸೌಧದಲ್ಲಿ ಭಾನುವಾರ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ಜಿಲ್ಲಾಮಟ್ಟದ ಯೋಜನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸಭೆಯನ್ನು ಉದ್ಘಾಟಿಸಿ ಮಾತನಾಡಿ, “ಭಾರತೀಯ ಜನತಾ ಪಾರ್ಟಿ ತನ್ನ ಕಾರ್ಯಕರ್ತರಿಗೆ ಹಮ್ಮಿಕೊಂಡಿರುವ ತರಬೇತಿ ಅಭಿಯಾನವಿದು. ಪಕ್ಷದ ಕಾರ್ಯಕರ್ತರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಮೂಡಿಸುವುದು, ಸಾಂಘಿಕ ಶಕ್ತಿಯನ್ನು ವೃದ್ಧಿಸುವುದು ಮತ್ತು ಶಿಸ್ತುಬದ್ಧ ರಾಷ್ಟ್ರ ನಿರ್ಮಾಣಕ್ಕೆ ಸಜ್ಜುಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ. ಈ ತರಬೇತಿಯನ್ನು ಜಿಲ್ಲಾ ಮಟ್ಟದಿಂದ ಆರಂಭಿಸಿ ಮಂಡಲ ಮತ್ತು ಬೂತ್ ಮಟ್ಟದವರೆಗೆ ತಲುಪಿಸುವ ಯೋಜನೆಯಿದೆ. ಈ ಅಭಿಯಾನವು “ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ” ಎಂಬ ದೀನದಯಾಳ್ ಉಪಾಧ್ಯಾಯರ ಚಿಂತನೆಗಳಿಂದ ಪ್ರೇರಿತವಾಗಿದೆ” ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿದೆ. “ವಿಕಸಿತ ಭಾರತ 2047” ಎಂಬುದು ಮೋದೀಜಿಯವರ ಬಹುದೊಡ್ಡ ಕನಸು ಮತ್ತು ಯೋಜನೆ. ಭಾರತವು ಸ್ವಾತಂತ್ರ್ಯದ ನೂರನೇ ವರ್ಷವನ್ನು ಆಚರಿಸುವ ವೇಳೆಗೆ (2047) ದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ದೃಷ್ಟಿಕೋನವಾಗಿದೆ.ಬ್ಈ ಅಭಿಯಾನವು ಮುಖ್ಯವಾಗಿ ಯುವಶಕ್ತಿ, ನಾರೀಶಕ್ತಿ, ಬಡತನ ನಿರ್ಮೂಲನೆ ಮತ್ತು ಎಲ್ಲರಿಗೂ ಮೂಲಭೂತ ಸೌಕರ್ಯಗಳ ಲಭ್ಯತೆ ಹಾಗೂ ಕೃಷಿ ಆಧುನೀಕರಣ ಮತ್ತು ರೈತರ ಆದಾಯ ಹೆಚ್ಚಳ ಎಂಬ ನಾಲ್ಕು ವರ್ಗಗಳ ಸಬಲೀಕರಣದ ಮೇಲೆ ಕೇಂದ್ರೀಕರಿಸಿದೆ ಎಂದರು.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ (45) ಅವರ ಆಯ್ಕೆಯು ಭಾರತೀಯ ರಾಜಕೀಯದಲ್ಲಿ ಒಂದು ಪ್ರಮುಖ “ಯುವಶಕ್ತಿ”ಯ ಸಂಕೇತವಾಗಿ ಹೊರಹೊಮ್ಮಿದೆ. ಇದು ಪಕ್ಷದಲ್ಲಿನ “ಪೀಳಿಗೆಯ ಬದಲಾವಣೆ”ಯನ್ನು ಸೂಚಿಸುತ್ತದೆ. ಮೋದಿಯವರ “ಸ್ಟಾರ್ಟ್ ಅಪ್ ಇಂಡಿಯಾ” ಮತ್ತು “ಮೇಕ್ ಇನ್ ಇಂಡಿಯಾ” ಯೋಜನೆಗಳು ಯುವಶಕ್ತಿಯನ್ನು ವಿಕಸಿತ ಭಾರತದತ್ತ ಮುನ್ನಡೆಸುತ್ತಿವೆ ಎಂದು ಹೇಳಿದರು.
ರಂಜಾನ್ ಮತ್ತು ಯುಗಾದಿಗೆ ಆಹಾರದ ಕಿಟ್ ವಿತರಣೆ :
ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಮುಸಲ್ಮಾನ್ ಮತ್ತು ಹಿಂದೂ ಬಾಂಧವರಿಗೆ ಪ್ರತಿಯೊಂದು ವಾರ್ಡ್ ಗಳಲ್ಲಿಯೂ ಬಡವರಿಗೆ ಬಿಜೆಪಿ ಪಕ್ಷದಿಂದ ಆಹಾರದ ಕಿಟ್ ವಿತರಣೆ ಮಾಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಇರಾನಿನ ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆ ಖಂಡನೀಯ : ಟ್ರಂಪ್ ವಿಶ್ವನಾಯಕನಂತೆ ಭಾರತವನ್ನೂ ಸೇರಿದಂತೆ ಹಲವಾರು ದೇಶಗಳನ್ನು ಬೆದರಿಸುವ ಹಾಗೂ ಹಿಡಿತ ಸಾಧಿಸುವ ಪ್ರಯತ್ನ ನಡೆಸಿದ್ದಾರೆ. ವಿಶ್ವದೆಲ್ಲೆಡೆ ಅದರಲ್ಲೂ ಅರಬ್ ರಾಷ್ಟ್ರಗಳಲ್ಲಿ ರಂಜಾನ್ ಮಾಸಾಚರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಟ್ರಂಪ್ ಇಸ್ರೇಲ್ ದೇಶದೊಂದಿಗೆ ಸೇರಿಕೊಂಡು ಇರಾನಿನ ಸಾಕಷ್ಟು ಅಮಾಯಕರನ್ನು, ಮಹಿಳೆಯರನ್ನು, ಶಾಲೆಗಳಲ್ಲಿರುವ ಮಕ್ಕಳ ಮೇಲೆ ಬಾಂಬ್ ಹಾಕಿ ಹತ್ಯೆ ಮಾಡಿರುವುದು ಖಂಡನೀಯ. ಟ್ರಂಪ್ ಮನಸ್ಥಿತಿಯಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಮೋದಿಯವರಂತಹ ನಾಯಕ ಇಡೀ ವಿಶ್ವಕ್ಕೇ ಬೇಕಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ಹೇಳೀದರು.








