Sidlaghatta : “ನಾನು, ನಾನೇ, ನನ್ನಿಂದ…” ಎನ್ನುವ ದುರಹಂಕಾರದ ಮಾತುಗಳನ್ನು ಬಿಟ್ಟು, “ದೇವರ ಕೃಪೆಯಿಂದ, ಕಾಂಗ್ರೆಸ್ ಕಾರ್ಯಕರ್ತರ, ಗುರು-ಹಿರಿಯರ ಆಶೀರ್ವಾದದಿಂದ ಮತ್ತು ಎಲ್ಲರ ಸಹಕಾರದಿಂದ” ಎಂಬ ವಿನಯಪೂರ್ವಕ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿಸಿದರು.
ಕ್ಷೇತ್ರದಲ್ಲಿ ಮುಂಬರುವ 2028 ರ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಎನ್.ರವಿಕುಮಾರ್ ಹಾಗು ತಮ್ಮ ನಡುವೆ ಮಾತ್ರ ಸ್ಪರ್ಧೆ (ಪೈಪೋಟಿ) ಇರಲಿದೆ. ಉಳಿದವರು ಮೂರನೇ ಅಥವ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಡುತ್ತಾರೆ ಎಂದು 2023 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಪುಟ್ಟು ಆಂಜಿನಪ್ಪ ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಎನ್ನುವುದರ ಬದಲು ನಾವು ಎಂದಾಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳ್ಳುತ್ತದೆ. ಮತದಾರ ದೇವರುಗಳ ತೀರ್ಮಾನವೇ ಅಂತಿಮ ಎಂಬುದನ್ನು ಮರೆಯಬಾರದು. ಕಾಂಗ್ರೆಸ್ ಪಕ್ಷವೇ ನನ್ನ ತಾಯಿ ಮತ್ತು ದೇವರು ಎಂದು ಯಾರು ತಿಳಿದು ಅದರಂತೆ ನಡೆದುಕೊಳ್ಳುತ್ತಾರೋ ಅವರಿಗೆ ಪಕ್ಷ ಖಂಡಿತವಾಗಿಯೂ ಸ್ಥಾನಮಾನಗಳನ್ನು ನೀಡುತ್ತದೆ. ಪುಟ್ಟು ಆಂಜಿನಪ್ಪ ಅವರು ದುಡುಕಬಾರದು. ಈ ಹಿಂದೆ ಕೂಡ ಎರಡು ಬಾರಿ ದುಡುಕಿ ಪಕ್ಷ ವಿರೋಧಿಯಾಗಿ ಕೆಲಸ ಮಾಡಿದ್ದೀರಿ. ಸ್ವತಂತ್ರ ಅಭ್ಯರ್ಥಿ ಎಂಬುದಾಗಿ ತಮ್ಮನ್ನು ಬಿಂಬಿಸಿಕೊಂಡು ತಮ್ಮ ಜೊತೆಗಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರಕ್ಕೀಡು ಮಾಡಬೇಡಿ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಒಡೆಯುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿರುವವರಿಗೆ ವ್ಯಕ್ತಿ ಪೂಜೆಯಿಲ್ಲ. ಇಲ್ಲಿ ಪಕ್ಷವೇ ದೊಡ್ಡದು. ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿದ್ದು ಪಕ್ಷವನ್ನು ಸಂಘಟಿಸೋಣ. ಪಕ್ಷದೊಳಗೆ ಇದ್ದು, ಸ್ವತಂತ್ರ ಅಭ್ಯರ್ಥಿ ಎಂಬಂತೆ ಮಾತನಾಡಿ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಬೇಡಿ ಎಂದು ಹೇಳಿದರು.
ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ. ಕಾಂಗ್ರೆಸ್ ಪಕ್ಷದೊಳಗಿದ್ದು ಕತ್ತು ಕೊಯ್ಯುವ ಕೆಲಸ ಮಾಡುವುದು ಬೇಡ. ಒಳಗೊಂದು ಹೊರಗೊಂದು ಮುಖವಾಡ ಧರಿಸಬಾರದು. 2028 ರ ಚುನಾವಣೆಯಲ್ಲಿ ಯಾರು ಕಾಂಗ್ರೆಸ್ ಶಾಸಕ ಎಂಬುದನ್ನು ತೀರ್ಮಾನಿಸುವುದು ಕ್ಷೇತ್ರದ ಮತದಾರ ದೇವರುಗಳು ಎಂಬ ಎಚ್ಚರವಿರಲಿ ಎಂದರು.








