![21Feb24Sd2a Sidlaghatta Constitution Awareness chariot](https://www.sidlaghatta.com/wp-content/uploads/2024/02/21Feb24Sd2a.jpg)
Sidlaghatta : ದೇಶಾಧ್ಯಂತ ನೂರಾರು ಜಾತಿ ಧರ್ಮಗಳಿದ್ದರೂ ಸಹ ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ ನಮ್ಮದಾಗಿದೆ ಎಂದರೆ ಅದಕ್ಕೆ ದೇಶದ ಸಂವಿಧಾನವೇ ಕಾರಣ ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
ತಾಲ್ಲೂಕಿನ ಹಂಡಿಗನಾಳದ ಮೂಲಕ ರೇಷ್ಮೆ ನಗರಕ್ಕೆ ಪ್ರವೇಶ ಮಾಡಿದ ಸಂವಿಧಾನ ಜಾಗೃತಿ ಜಾಥದ ರಥವನ್ನು ಸ್ವಾಗತಿಸಿದ ನಂತರ ನಡೆದ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯಾಗಿದೆ. ಜಾತ್ಯಾತೀತ ಗ್ರಂಥ ಸಂವಿಧಾನವನ್ನು ಗೌರವಿಸಿ ಅದರ ಆಶಯಗಳನ್ನು ಈಡೇರಿಸುವ ಮೂಲಕ ಜಾತಿ ಧರ್ಮ ಮರೆತು ವಿಶ್ವ ಮಾನವರಾಗಿ ಬದುಕುಬೇಕು. ದೇಶದ ಏಳಿಗೆಗಾಗಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಸಂವಿಧಾನ ಜಾಗೃತಿ ರಥಕ್ಕೆ ರೇಷ್ಮೆ ನಗರ ಶಿಡ್ಲಘಟ್ಟದಲ್ಲಿ ರೇಷ್ಮೆ ಗೂಡಿನ ಹಾರ ಹಾಕಿ ಪೂರ್ಣಕುಂಭದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾತು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ನಗರಸಭೆ ಪೌರಾಯುಕ್ತ ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಚಲಪತಿ, ಮುಖಂಡರಾದ ರಮೇಶ್, ಮುನಿರಾಜು, ರಾಮಾಂಜನೇಯ ಮತ್ತಿತರರು ಉಪಸ್ಥಿತರಿದ್ದರು.