ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ(ನಿ) ವತಿಯಿಂದ 41 ಮಹಿಳಾ ಸ್ವಸಹಾಯ ಸಂಘಗಳಿಗೆ ಇಂದು ಒಂದು ಕೋಟಿ 86 ಲಕ್ಷ 30 ಸಾವಿರ ರೂಗಳ ಸಾಲ ವಿತರಣೆ ಮಾಡಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್ ಮಾತನಾಡಿದರು.
ಮಳ್ಳೂರು ಎಸ್.ಎಫ್.ಸಿ.ಎಸ್. ಬ್ಯಾಂಕ್ ನಿಂದ ಈಗಾಗಲೇ ಮಹಿಳೆಯರಿಗೆ ಹಾಗೂ ರೈತರಿಗೆ ಸಾಲವಾಗಿ ಸುಮಾರು ಹತ್ತು ಕೋಟಿ ರೂಗಳನ್ನು ವಿತರಿಸಲಾಗಿದೆ. ನಗರ ಎಸ್.ಎಫ್.ಸಿ.ಎಸ್.ಬ್ಯಾಂಕ್ ನಿಂದ 17 ಕೋಟಿ ರೂಗಳ ಸಾಲ ವಿತರಣೆ ಮಾಡಲಾಗಿದೆ, ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ಹೆಚ್ಚೆಚ್ಚು ಸಾಲ ನೀಡುತ್ತಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಾಲ ವಿತರಣೆ ಮಾಡಿದ ಕೀರ್ತಿ ಅಧ್ಯಕ್ಷ ಗೋವಿಂದೇಗೌಡರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಹಿಳೆಯರು ಶೇಕಡ 75 ರಷ್ಟು ಮರು ಪಾವತಿ ಮಾಡಿದ್ದರೆ. ಮಹಿಳೆಯರಿಗೆ ಅನುಕೂಲವಾಗಲು ಮೈಕ್ರೋ ಎಟಿಎಂ ವಾಹನವನ್ನು ನಿಮ್ಮ ಬಳಿಗೆ ಬರುವಂತೆ ಮಾಡಲಾಗಿದೆ. ತಾಲ್ಲೂಕಿನ ಮಹಿಳೆಯರು ಉದ್ದೇಶಿತ ಯೋಜನೆಗೆ ಸಾಲದ ಹಣ ಬಳಸಿಕೊಂಡು ಸಕಾಲದಲ್ಲಿ ಬ್ಯಾಂಕ್ಗೆ ಮರುಪಾವತಿ ಮಾಡಬೇಕು. ಜೊತೆಗೆ ತಮ್ಮ ಉಳಿತಾಯದ ಹಣವನ್ನು ನಿಮ್ಮ ಎಸ್.ಎಫ್.ಸಿ.ಎಸ್. ಬ್ಯಾಂಕ್ನಲ್ಲೆ ಇಟ್ಟು ನಿಮಗೆ ಬೇಕಾದಾಗ ಹಣ ಪಡೆದುಕೊಳ್ಳಬಹುದು ಎಂದರು.
ಮಳ್ಳೂರು ಎಸ್ಎಫ್ಸಿಎಸ್ ಅಧ್ಯಕ್ಷ ರಾಮರೆಡ್ಡಿ ಮಾತನಾಡಿ, ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಬ್ಯಾಂಕ್ ಉತ್ತಮವಾಗಿ ನಡೆಯಲು ಸಾಧ್ಯವಾಗಿದೆ ಎಂದರು.
ಎಸ್ಎಫ್ಸಿಎಸ್ ಉಪಾದ್ಯಕ್ಷ ಸಿ.ನಾರಾಯಣಸ್ವಾಮಿ, ಗ್ರಾಮದ ಮುಖಂಡ ಎಂ.ಆರ್.ಮುನಿಕೃಷ್ಣಪ್ಪ, ನಿರ್ದೇಶಕರಾದ ಭಕ್ತರಹಳ್ಳಿ ಕೆ.ಮುನಿರಾಜು, ಶಾಂತಮ್ಮ, ಮಳ್ಳೂರು ಪದ್ಮಮ್ಮ, ಕಾರ್ಯನಿರ್ವಾವಹಣಾಧಿಕಾರಿ ಮಂಜುನಾಥ್, ಮೇಲೂರು ವೆಂಕಟರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅನಂದ್, ಮೇಲ್ವಿಚಾರಕ ಶ್ರೀನಾಥ್ ಹಾಜರಿದ್ದರು.