Sidlaghatta : ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಎನ್. ರವಿಕುಮಾರ್ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಗರದ ಸರ್ವತೋಮುಖ ಅಭಿವೃದ್ಧಿಗೆ ₹2.64 ಕೋಟಿ ಮೌಲ್ಯದ ಮೌಲ್ಯದ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದ್ದು, ಈ ಅನುದಾನದಡಿ ಹಲವು ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ.
2020–21ನೇ ಸಾಲಿನ ಸ್ವಚ್ಛ ಭಾರತ್ ಮಿಷನ್ – 1.0 ಯೋಜನೆಯ ಉಳಿಕೆ ಹಣದಿಂದ ₹97 ಲಕ್ಷ ವೆಚ್ಚದಲ್ಲಿ ವಾಸವಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಕಾಮಗಾರಿ ಎರಡು ಟೆಂಡರ್ ಗಳ ಮೂಲಕ ಕ್ರಮವಾಗಿ ₹37 ಲಕ್ಷ ಮತ್ತು ₹61 ಲಕ್ಷ ಮೊತ್ತಗಳಲ್ಲಿ ಅನುಮೋದನೆಗೊಂಡಿದೆ. ವಾಸವಿ ರಸ್ತೆಯ ಸುಧಾರಣೆ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಿಗಳ ಬಹುಕಾಲದ ಬೇಡಿಕೆಯಾಗಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
15ನೇ ಹಣಕಾಸು ಯೋಜನೆಯ ಉಳಿಕೆ ಮೊತ್ತದಿಂದ ನಗರಸಭೆಗೆ ₹97 ಲಕ್ಷ ಮೌಲ್ಯದ 10 ಘನ ತ್ಯಾಜ್ಯ ಸಂಗ್ರಹಣಾ ಆಟೋ ಟಿಪ್ಪರ್ ವಾಹನಗಳನ್ನು, ₹18 ಲಕ್ಷ ವೆಚ್ಚದಲ್ಲಿ 2 ಫರ್ಗೂಸನ್ ಟ್ರ್ಯಾಕ್ಟರ್ ಗಳನ್ನು ಹಾಗೂ ₹42 ಲಕ್ಷ ವೆಚ್ಚದಲ್ಲಿ ಕಾಂಪ್ಯಾಕ್ಟರ್ ವಾಹನ ಒದಗಿಸಲಾಗಿದೆ. ಇದಲ್ಲದೆ, ಸೊಳ್ಳೆ ನಿಯಂತ್ರಣಕ್ಕಾಗಿ ₹10 ಲಕ್ಷ ವೆಚ್ಚದಲ್ಲಿ ಫಾಗಿಂಗ್ ಯಂತ್ರ ಖರೀದಿಸಿ 31 ವಾರ್ಡ್ ಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಸಿಲಿಂಡರ್ ಫಾಗಿಂಗ್ ಯಂತ್ರಗಳನ್ನು ತರಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
2020–21ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ವಾರ್ಡ್ ಸಂಖ್ಯೆ 15 ರಲ್ಲಿ ರಸ್ತೆ ಕಾಂಕ್ರೀಟ್ ಹಾಗೂ ಡ್ರೈನೇಜ್ ವ್ಯವಸ್ಥೆಗಾಗಿ ₹36.07 ಲಕ್ಷ ಅನುದಾನ ಒದಗಿಸಲಾಗಿದೆ. 2023–24ನೇ ಸಾಲಿನ ಯೋಜನೆಯಡಿಯಲ್ಲಿ ವಾರ್ಡ್ ಸಂಖ್ಯೆ 16 ರಲ್ಲಿ ರಸ್ತೆ ಕಾಂಕ್ರೀಟ್, ಡ್ರೈನೇಜ್, ಪ್ಲಾಟ್ ಲೆವೆಲಿಂಗ್ ಸೇರಿದಂತೆ ₹61.04 ಲಕ್ಷ ವೆಚ್ಚದ ಸ್ಥಾಪನಾ ಕಾಮಗಾರಿಗಳಿಗೆ ಅನುಮೋದನೆ ಲಭಿಸಿದ್ದು, ಈ ಎರಡೂ ಯೋಜನೆಗಳ ಒಟ್ಟು ವೆಚ್ಚ ₹97.11 ಲಕ್ಷವಾಗಿದೆ.
2021–22ನೇ ಸಾಲಿನ ಮಿಲಿಯನ್ ಪ್ಲಸ್ ಯೋಜನೆ ಅಡಿಯಲ್ಲಿ ತ್ಯಾಜ್ಯ ಸಂಗ್ರಹಣೆಗೆ ಎರಡು ನೂತನ ಟ್ರ್ಯಾಕ್ಟರ್ ಗಳ ಖರೀದಿಗೆ ₹18 ಲಕ್ಷ ಅನುದಾನ ಮಂಜೂರಾಗಿದೆ. 2023–24 ಹಾಗೂ 2024–25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ನಗರಸಭಾ ಕಚೇರಿ ಸೌಲಭ್ಯ ಸುಧಾರಣೆಗಾಗಿ ₹27.30 ಲಕ್ಷ ಹಾಗೂ ಕಾಂಪೌಂಡ್ ವಾಲ್ ನಿರ್ಮಾಣಕ್ಕಾಗಿ ₹14.70 ಲಕ್ಷ ಸೇರಿ ₹42 ಲಕ್ಷ ಮಂಜೂರಾಗಿದೆ.
ಈ ಎಲ್ಲಾ ಯೋಜನೆಗಳು ನಗರದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಡ್ರೈನೇಜ್ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಹಾಗೂ ಆಡಳಿತ ಸೌಲಭ್ಯಗಳ ಸುಧಾರಣೆಗೆ ಮತ್ತು ಶಿಡ್ಲಘಟ್ಟವನ್ನು ಮಾದರಿ ನಗರವನ್ನಾಗಿ ರೂಪಿಸುವ ಕನಸು ನನಸಾಗಿಸಲು ಸಹಕಾರಿಯಾಗಿದೆ. ನಗರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಶಿಡ್ಲಘಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೊಸ ವೇಗ ದೊರೆತಿದೆ ಎಂದು ಶಾಸಕರು ತಿಳಿಸಿದರು.
“ಅಕ್ರಮ – ಸಕ್ರಮ” ಸಂಬಂಧಿತ ಇ-ಖಾತೆ ಪ್ರಕ್ರಿಯೆ ಶಿಡ್ಲಘಟ್ಟದಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂಬ ವಿಚಾರಕ್ಕೆ ವಿಷಾದ ವ್ಯಕ್ತಪಡಿಸಿದ ಶಾಸಕರು, ಅಧಿಕಾರಿಗಳು ಮನೆಮನೆಗೆ ತೆರಳಿ ಜನರಿಗೆ ಇ-ಖಾತೆ ಮಾಡಿಕೊಡುವ ಕೆಲಸವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ನಗರಸಭೆ ಪೌರಾಯುಕ್ತ ಮೋಹನ್, ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ಸದಸ್ಯರಾದ ಅನಿಲ್ ಕುಮಾರ್, ಮನೋಹರ್, ಮಂಜುನಾಥ್, ನಾರಾಯಣಸ್ವಾಮಿ, ರಾಘವೇಂದ್ರ, ನಂದಕಿಶನ್, ಶಿವಮ್ಮ ಮುನಿರಾಜು, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ್, ಲಕ್ಷ್ಮಣ್, ರಮೇಶ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಿರ್ದೇಶಕ ಮುರಳಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.