Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಭವ್ಯವಾಗಿ ಜರುಗಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎ. ನಾಗರಾಜ್ ಹಾಗೂ ನಿವೃತ್ತ ಸೈನಿಕ ಮಂಜುನಾಥ್ ಆರ್.ವಿ. ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಮಾತನಾಡಿದ ಎ. ನಾಗರಾಜ್, ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೇ, ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ದೇಶಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಒತ್ತಿಹೇಳಿದರು. ದೇಶಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಅನುಸರಿಸುವ ಮೂಲಕ ಉತ್ತಮ ವ್ಯಕ್ತಿತ್ವ ವಿಕಸನ ಸಾಧ್ಯವೆಂದರು.

ಈ ಸಂದರ್ಭದಲ್ಲಿ “Freedom to Glory: 79 Women Stories of Courage and Achievements” ಎಂಬ ಆಂಗ್ಲ ಸಂಕಲನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. 79 ಮಹಿಳೆಯರ ಸಾಧನೆಗಳನ್ನು ಒಳಗೊಂಡ ಈ ಕೃತಿಗೆ ಮಾಹಿತಿಯನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿದ್ದು, ಪ್ರಾಂಶುಪಾಲರು ಮುನ್ನುಡಿ ಬರೆದಿದ್ದಾರೆ. ಚಿತ್ರಸಂಗ್ರಹಣೆ ಹಾಗೂ ಮಾಹಿತಿಯನ್ನು ಸಮರ್ಪಕವಾಗಿ ನೀಡಿರುವುದು ವಿಶೇಷ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಅಶೋಕ್ ಮಾತನಾಡಿ, ಸಮಾಜದಲ್ಲಿ ಏಕತೆ, ಐಕ್ಯತೆ ಮತ್ತು ಭ್ರಾತೃತ್ವದ ಗುಣಗಳನ್ನು ಬೆಳೆಸುವ ಮೂಲಕ ಮಾತ್ರ ನಿಜವಾದ ಸ್ವಾತಂತ್ರ್ಯ ಸಾಧ್ಯವಿದೆ ಎಂದು ಹೇಳಿದರು. ಆಂತರಿಕ ಕಲಹಗಳಿಂದಲೇ ಬ್ರಿಟೀಷರು ಭಾರತವನ್ನು ಆಳಲು ಸಾಧ್ಯವಾಯಿತು. ಇಂದಿನ ವಿದ್ಯಾರ್ಥಿಗಳು ನವಸಮಾಜದ ನಿರ್ಮಾತೃಗಳಾಗಬೇಕಾದರೆ ವಿಶ್ವಭ್ರಾತೃತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ NCC ವಿದ್ಯಾರ್ಥಿಗಳಿಂದ ಪಥಸಂಚಲನ, ಧ್ವಜ ವಂದನೆ ಹಾಗೂ ಡಾಲ್ಫಿನ್ ಸಿಬಿಎಸ್ಸಿ ಮತ್ತು ರಾಜ್ಯ ಪಠ್ಯಕ್ರಮ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. NCC ಅಧಿಕಾರಿಗಳಾದ ಸುಬೇದಾರ್ ಜಯದೇವ್ ಸಿಂಗ್ ಮತ್ತು ಯೋಗೇಶ್ ಪ್ರನಸಾಯಿ, CBSE ವಿಭಾಗದ ಪ್ರಾಂಶುಪಾಲ ಎಲ್. ಮುನಿಕೃಷ್ಣಪ್ಪರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ನಿರೂಪಣೆಯನ್ನು ಆಂಗ್ಲದಲ್ಲಿ ನಿಹಾರಿತ ವಿಜಯ್, ನಯನ ಮತ್ತು ತೇಜಶ್ರೀ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ವರ್ಗ, ಎಲ್ಲಾ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.