Dyavappanagudi, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿಯ ಶ್ರೀ ಯೋಗಿ ದ್ಯಾವಪ್ಪನವರ ಜಯಂತೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರಿಂದ ಎತ್ತುಗಳ ಅದ್ದೂರಿ ಮೆರವಣಿಗೆ ನಡೆಯಿತು. ಈ ಎತ್ತುಗಳ ಅದ್ದೂರಿ ಮೆರವಣಿಗೆಗೆ ತಹಶೀಲ್ದಾರ್ ಗಗನ ಸಿಂಧು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಚಾಲನೆ ನೀಡಿದರು.
ಗ್ರಾಮಸ್ಥರಿಂದ ಕೋಲಾಟ ನೃತ್ಯ ನಡೆಯಿತು. ಶ್ರೀ ಯೋಗಿ ದ್ಯಾವಪ್ಪನವರ ದೇವಸ್ಥಾನದ ಬಳಿ ನಡೆದ ದನಗಳ ಜಾತ್ರೆಗೆ ಸುತ್ತು ಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಗಳಿಂದಿಂದ ಎತ್ತುಗಳು ಆಗಮಿಸಿದ್ದವು. ಈ ಜಾತ್ರೆಯಲ್ಲಿ ವಿಶೇಷವಾಗಿ ಎತ್ತುಗಳ ಮಾರಾಟ, ಕೊಂಡುಕೊಳ್ಳುವುದು ಬಹಳ ಜೋರಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಅವರು ಮಾತನಾಡಿ, ರೈತರಿಗೆ ಮತ್ತು ಭಕ್ತಾದಿಗಳಿಗೆ ದ್ಯಾವಪ್ಪ ತಾತನ ಮೇಲೆ ಇರುವ ನಂಬಿಕೆ ಇಂದಿಗೂ ಎಂದಿಗೂ ಹುಸಿಯಾಗಿಲ್ಲ. ಹಾಗೆಯೇ ಇಲ್ಲಿನ ಎತ್ತುಗಳ ಜಾತ್ರೆಯು ಈ ಭಾಗದ ಜನರಿಗೆ ಮಾತ್ರ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದವರೆಗೂ ಈ ಜಾತ್ರೆಯು ಹರಡಬೇಕು ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇಲ್ಲಿ ನೆರೆದಿರುವ ಎತ್ತುಗಳ ಜಾತ್ರೆಯ ಪ್ರಯುಕ್ತ ಇಲ್ಲಿ ಎತ್ತುಗಳ ಜಾತ್ರೆಗೆ ಸ್ಥಳವನ್ನು ದ್ಯಾವಪ್ಪ ತಾತನವರ ಟ್ರಸ್ಟ್ ಅಥವಾ ಸಮಿತಿ ಹೆಸರಿಗೆ ಮಾಡಬೇಕು. ಇದರಿಂದ ರೈತರಿಗೆ ದನಗಳನ್ನು ಮೇಯಿಸಲು ಹಾಗೂ ಸಾಕುವುದಕ್ಕೆ ಮತ್ತಷ್ಟು ಹುರುಪು ಬರುತ್ತದೆ ಹಾಗೂ ರೈತಾಪಿ ವರ್ಗ ಉಳಿಯುತ್ತದೆ ಎಂದು ಹೇಳಿದರು.
ರೈತರು, ದ್ಯಾವಪ್ಪ ತಾತನವರ ದೇವಾಲಯದ ಭಕ್ತರು ಹಾಜರಿದ್ದರು.








