Home News ಪಕ್ಷದಲ್ಲಿ ನಿರ್ಲಕ್ಷ್ಯ; ಹೈಕಮಾಂಡ್ ಗಮನಹರಿಸಲಿ: ಮಾಜಿ ಶಾಸಕ ಎಂ.ರಾಜಣ್ಣ

ಪಕ್ಷದಲ್ಲಿ ನಿರ್ಲಕ್ಷ್ಯ; ಹೈಕಮಾಂಡ್ ಗಮನಹರಿಸಲಿ: ಮಾಜಿ ಶಾಸಕ ಎಂ.ರಾಜಣ್ಣ

0
Sidlaghatta ex MLA M Rajanna Press meet

Sidlaghatta : “ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ನಂತರ ನನಗೂ ನನ್ನ ಬೆಂಬಲಿಗರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಗೌರವ ಲಭಿಸಿಲ್ಲ. ಈ ಕುರಿತು ಪಕ್ಷದ ಹೈಕಮಾಂಡ್‌ಗೆ ಮನವರಿಕೆ ಮಾಡಿಸಲಾಗುವುದು,” ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎಂ.ರಾಜಣ್ಣ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತು ನನ್ನ ಬೆಂಬಾಲಕರು ಬಿಜೆಪಿ ಸೇರ್ಪಡೆಗೊಂಡಿದ್ದೇವೆ. ನಂತರ ಗ್ರಾಮ ಪಂಚಾಯಿತಿ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು ಶ್ರಮಿಸಿದ್ದೇವೆ,” ಎಂದರು.

ಆದರೆ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ರೂಪಾದ ನಂತರ, ಪಕ್ಷದ ಸ್ಥಳೀಯ ನಾಯಕರಿಂದ ಹಾಗೂ ಎನ್‌ಡಿಎ ನಾಯಕರಿಂದ ತಾವು ಹಾಗೂ ತಮ್ಮ ಬೆಂಬಲಿಗರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು. “ಪಕ್ಷದಲ್ಲಿ ಯಾವುದೇ ಜವಾಬ್ದಾರಿ, ಸ್ಥಾನಮಾನ ನಮಗೆ ಲಭಿಸಿಲ್ಲ. ಇದರಿಂದ ಬೇಸರಗೊಂಡು, ಇತ್ತೀಚೆಗೆ ಪಕ್ಷದ ಸಭೆ, ಸಂಘಟನಾ ಚಟುವಟಿಕೆಗಳಿಂದ ನಾನು ದೂರ ಉಳಿದಿದ್ದೇನೆ,” ಎಂದರು.

“ಪಕ್ಷದ ಸ್ಥಿತಿಗತಿಯ ಕುರಿತು ಚರ್ಚಿಸಲು, ಬೆಂಬಲಿಗರ ಒತ್ತಡದಿಂದ, ಶನಿವಾರ ನಾನು ಜೆಡಿಎಸ್ ತೊರೆದು ಬಿಜೆಪಿ ಸೇರಿದ ಪ್ರಮುಖ ಮುಖಂಡರ ಜೊತೆ ಸಭೆ ನಡೆಸಿದೆವು. ಎನ್‌ಡಿಎ ಮೈತ್ರಿಯಿಂದ ನಮಗೆ ರಾಜಕೀಯ ಹಿನ್ನಡೆ ಉಂಟಾಗಿದೆ ಎಂಬ ವಿಚಾರದಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಲವರಿಗೆ ಸುಣ್ಣ, ಕೆಲವರಿಗೆ ಬೆಣ್ಣೆ ಎನ್ನುವಂತೆ ಪಕ್ಷದಲ್ಲಿ ಭಾವನೆಯಿದೆ,” ಎಂದು ರಾಜಣ್ಣ ವಿವರಿಸಿದರು.

“ಈ ಸಭೆಯಿಂದ ಭಿನ್ನಮತ, ಬಣಗಳ ಉದಯ ಎಂಬ ವದಂತಿಗಳು ಹರಡಿವೆ. ಆದರೆ ಇದು ಸತ್ಯವಲ್ಲ. ನಮ್ಮ ನಡುವೆ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳಿವೆ. ಅವರನ್ನು ಪರಿಹರಿಸಲು ಹೈಕಮಾಂಡ್ ಹಾಗೂ ಸಂಸದ ಡಾ. ಕೆ.ಸುಧಾಕರ್ ಅವರ ಭೇಟಿಗೆ ಹೋಗುತ್ತೇವೆ,” ಎಂದರು. “ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಡಾ. ಸುಧಾಕರ್ ಅವರು ನನ್ನ ವೈರಾಗ್ಯದ ಕುರಿತು ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೆ ನಾನು ಸಭೆ ನಡೆಸಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇದೊಂದು ಚರ್ಚೆಯ ಭಾಗವಾಗಿದ್ದು, ಭಿನ್ನಮತ ಸಭೆಯಲ್ಲ,” ಎಂದು ಸ್ಪಷ್ಟಪಡಿಸಿದರು.

“ನಾವು ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ನಮ್ಮ ಪಕ್ಷದ ಹೈಕಮಾಂಡ್ ಎಂದರೆ ಡಾ. ಕೆ.ಸುಧಾಕರ್. ಅವರಿಗೆ ನಮ್ಮ ಸಮಸ್ಯೆಗಳನ್ನು ಸ್ಪಷ್ಟಪಡಿಸುತ್ತೇವೆ. ಅವರು ಎನ್‌ಡಿಎ ನಾಯಕರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದರು.

“ಮುಂದಿನ ದಿನಗಳಲ್ಲಿ ಎಲ್ಲ ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ. ಶಿಡ್ಲಘಟ್ಟದಲ್ಲಿ ನಾವು ಬಿಜೆಪಿ ಸಂಘಟನೆಯನ್ನು ಬಲಪಡಿಸಿ ಪಕ್ಷವನ್ನು ಮತ್ತಷ್ಟು ಉಜ್ವಲಗೊಳಿಸಲು ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ,” ಎಂದೂ ಅವರು ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸಿದವರು: ಬಿಜೆಪಿ ಮುಖಂಡರು ದೊಣ್ಣಹಳ್ಳಿ ರಾಮಣ್ಣ, ಅಶ್ವತ್ಥಪ್ಪ, ಕೆ.ಎಸ್. ಕನಕಪ್ರಸಾದ್, ದೇವರಾಜ್, ವೆಂಕಟೇಶ್, ರವಿ, ಭರತ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version