
Sidlaghatta : 1994-95ನೇ ಸಾಲಿನ ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ದಾಖಲೆ ಕಳವು ಪ್ರಕರಣ ಸಂಬಂಧ, ಶಿಡ್ಲಘಟ್ಟ ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ, ಜಂಗಮಕೋಟೆ ನಾಡ ಕಚೇರಿಯ ಹೆಚ್ಚುವರಿ ಗ್ರಾಮ ಸಹಾಯಕ ಜಿ.ಗಂಗಾಧರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕು ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಆರೋಪಿತ ಗಂಗಾಧರ್ ಅವರು ಏಪ್ರಿಲ್ 29ರಂದು ಅಭಿಲೇಖಾಲಯ ಶಾಖೆಗೆ ಬಂದು, “ಹಕ್ಕು ದಾಖಲೆ ಶಿರಸ್ತೆದಾರ್ ಅವರು ಸೂಚಿಸಿದ ಕಡತವನ್ನು ಪರಿಶೀಲಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಆದರೆ ಅವರ ವರ್ತನೆ ಕುರಿತು ಅನುಮಾನಗೊಂಡ ತಹಸೀಲ್ದಾರ್ ಅವರು, ಸಂಬಂಧಪಟ್ಟ ಶಿರಸ್ತೆದಾರ್ ಅವರನ್ನು ಸಂಪರ್ಕಿಸಿದಾಗ, ಅವರು ಅಂತಹ ಯಾವುದೇ ಸೂಚನೆ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ, ತಹಸೀಲ್ದಾರ್ ಅವರು ಮೇ 10 ರಂದು ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದರು. ತನಿಖೆ ನಂತರ ಗಂಗಾಧರ್ ಅವರನ್ನು ಬಂಧಿಸಲಾಗಿದೆ.
1994-95ನೇ ಸಾಲಿನ ಮಂಜೂರಿ ನಡಾವಳಿ ‘ಎ’ ವರ್ಗದ ಶಾಶ್ವತ ಸರ್ಕಾರಿ ದಾಖಲೆಗಳಲ್ಲೊಂದಾಗಿದ್ದು, ನೂರಾರು ರೈತರಿಗೆ ಭೂಮಿಯ ಮಂಜೂರಿಯ ಮಾಹಿತಿ ಇದರಲ್ಲಿ ದಾಖಲೆಯಾಗಿದೆ. ಈ ದಾಖಲೆಯ ಆಧಾರದ ಮೇಲೆ ಭೂಮಿ ದುರಸ್ತಿ, ಹಳೆ ಮಂಜೂರಿಯ ದಾಖಲೆ ಅನುಸಾರ ಖಾತೆ ನಿರ್ಮಾಣ ಕಾರ್ಯ ನಡೆಯುತ್ತದೆ.
ಆದರೆ, ಈ ದಾಖಲೆಗಳನ್ನು ಅಕ್ರಮವಾಗಿ ಬಳಸಿ, ಹೊಸ ಹೆಸರುಗಳನ್ನು ಸೇರಿಸುವ ಮೂಲಕ ದುರುದ್ದೇಶಪೂರಿತವಾಗಿ ಮಂಜೂರಿಯಾಗಿರುವಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂದು ತಹಸೀಲ್ದಾರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.