
Sidlaghatta: ಶಿಡ್ಲಘಟ್ಟ ನಗರದಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಫಲವಾದ ಕೊಳವೆಬಾವಿಯನ್ನು ಮುಚ್ಚದೆ ಹಾಗೆಯೆ ಬಿಡಲಾಗಿದೆ. ಗುರುಭವನ ನಿರ್ಮಾಣಕ್ಕೆ ತೆಗೆದ ಪಾಯದ ಪಕ್ಕದಲ್ಲೆ ತೆರೆದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೆ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಹಿಂದೆ ಸರ್ಕಾರಿ ಪ್ರೌಢಶಾಲೆಗೆ ಕುಡಿಯುವ ನೀರು ಮತ್ತು ನಿರ್ವಹಣೆಗೆಂದು ನೀರಿಗಾಗಿ ಕೊಳವೆಬಾವಿಯನ್ನು ಕೊರೆಸಲಾಗಿತ್ತಾದರೂ ಕೊಳವೆಬಾವಿಯಲ್ಲಿ ನೀರು ಸಿಗದೆ ವಿಫಲವಾಗಿದೆ. ವಿಫಲವಾದ ಕೊಳವೆ ಬಾವಿಯನ್ನು ಆಗಲೆ ಕೊಳವೆಬಾವಿ ಕೊರೆದವರು ಮುಚ್ಚಬೇಕಿತ್ತು. ಮುಚ್ಚದೇ ಹಾಗೆಯೆ ಬಿಟ್ಟಿದ್ದಾರೆ.
ನೀರು ಸಿಗದೆ ವಿಫಲವಾದ ಕೊಳವೆ ಬಾವಿಯನ್ನು ಮುಚ್ಚುವ ಕೆಲಸವನ್ನು ನಗರಸಭೆಯವರು ಮಾಡಬೇಕಿತ್ತು. ಬದಲಿಗೆ ಮುಚ್ಚದೆ ಕೊಳವೆಬಾವಿ ಮೇಲೆ ಒಂದು ಚಿಕ್ಕ ಗಾತ್ರದ ಸೈಜು ಗಲ್ಲನ್ನು ಇಟ್ಟು ಬಿಟ್ಟು ಬಿಟ್ಟಿದ್ದಾರೆ.
ಅಲ್ಲಿ ಕೊಳವೆಬಾವಿಯನ್ನು ಮುಚ್ಚದೆ ಹಾಗೆಯೆ ಬಿಟ್ಟಿರುವುದು ಅಲ್ಲಿ ಸುತ್ತಾಡುವವರ ಕಣ್ಣಿಗೆ ಬೀಳುತ್ತದೆ. ಕೆಲ ವಿದ್ಯಾರ್ಥಿಗಳು ಸೈಜು ಗಲ್ಲನ್ನು ಪಕ್ಕಕ್ಕಿಟ್ಟು ಕೊಳವೆಬಾವಿ ಒಳಗೆ ಕಲ್ಲು ಎಸೆದು ನೀರು ಇದೆಯಾ ಇಲ್ಲವಾ ಅಥವಾ ಶಬ್ಧ ಹೇಗೆ ಬರುತ್ತದೆ ಎಂದು ಕಿವಿಗೊಟ್ಟು ಕೇಳಿಸಿಕೊಳ್ಳುವ ಆಟ ಆಡುತ್ತಾರೆ.
ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚುವ ಹೊಣೆ ನಗರಸಭೆಯದ್ದು. ಹಾಗಾಗಿ ಏನಾದರೂ ಅಪಾಯ ಆಗುವ ಮುನ್ನ ವಿಫಲ ಕೊಳವೆಬಾವಿಯನ್ನು ಮುಚ್ಚುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.