
Sidlaghatta : SSLC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಾದ ಎಂ.ಪ್ರಶಾಂತ್ (592), ಸರ್ಕಾರಿ ಪ್ರೌಢಶಾಲೆ, ಸಾದಲಿ – ಒಂದು ಲಕ್ಷ ರೂ ; ಪಿ.ಎಸ್.ರಶ್ಮಿ(589), ಸರ್ಕಾರಿ ಪ್ರೌಢಶಾಲೆ, ಪಲಿಚೇರ್ಲು ಮತ್ತು ಎ.ವೈಭವಿ (589), ಸರ್ಕಾರಿ ಪ್ರೌಢಶಾಲೆ, ಚೀಮಂಗಲ – ಐವತ್ತು ಸಾವಿರ ರೂ ; ಮಾನಸ (581), ಸರ್ಕಾರಿ ಪ್ರೌಢಶಾಲೆ, ಜಂಗಮಕೋಟೆ – 25 ಸಾವಿರ ರೂ ಬಹುಮಾನ ನೀಡಿ ಶಾಸಕ ಬಿ.ಎನ್.ರವಿಕುಮಾರ್ ಪುರಸ್ಕರಿಸಿದರು.
ಶೇಕಡಾ 100 ರಷ್ಟು ಫಲಿತಾಂಶ ಪಡೆದಿರುವ ಐದು ಸರ್ಕಾರಿ ಪ್ರೌಢ ಶಾಲೆಗಳಾದ ಮುತ್ತೂರು, ಕುಂದಲಗುರ್ಕಿ, ದೊಡ್ಡತೇಕಹಳ್ಳಿ, ಸಾದಲಿ, ಚೀಮಂಗಲ ಶಾಲೆಗಳ ಶಿಕ್ಷಕರಿಗೆ ಒಟ್ಟಾರೆಯಾಗಿ ಐದು ಲಕ್ಷ ರೂಗಳನ್ನು ಬಹುಮಾನವಾಗಿ ಸಹ ನೀಡಿ ಶಿಕ್ಷಕರನ್ನು ಅವರು ಗೌರವಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 94ನೇ ವರ್ಷದ ಹುಟ್ಟು ಹಬ್ಬವನ್ನು ಸೋಮವಾರ ಹಂಡಿಗನಾಳದ ಶ್ರೀಬಾಲಾಜಿ ಕನ್ವೆಂಷನ್ ಹಾಲ್ ನಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಶೇ 100 ರಷ್ಟು ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರನ್ನು ಗೌರವಿಸುವ ಮೂಲಕ ಜೆಡಿಎಸ್ ಪಕ್ಷದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 94ನೇ ವರ್ಷದ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಇಳಿವಯಸಿನಲ್ಲೂ ಅವರು ಕೃಷಿ, ರೈತರು, ನೀರಾವರಿ ಯೋಜನೆಗಳ ಬಗ್ಗೆ ತೋರುವ ಕಾಳಜಿ, ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಇರಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಗೊಳಿಸುವ ಅವರ ರಾಜಕೀಯ ಅನುಭವ, ಜಾಣ್ಮೆ, ಮುತ್ಸದ್ದಿತನ, ಕಾಳಜಿಯನ್ನು ನಾವುಗಳೆಲ್ಲಾ ಅರಿತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಸುಮಾರು 6 ದಶಕಗಳ ಕಾಲ ಸುದೀರ್ಘ ರಾಜಕೀಯ ಅನುಭವ ಹೊಂದಿದ ಅವರು ಪ್ರಧಾನಿ ಹುದ್ದೆ ತೊರೆದರೂ ದೇಶಕ್ಕಾಗಿ ಹೋರಾಡುವ ಮತ್ತು ಜನರ ಬಗೆಗಿನ ಕಾಳಜಿಯನ್ನು ಕಾಯ್ದುಕೊಂಡು ಬಂದಿದ್ದಾರೆ. ಅವರು ನಾಡಿನ ನೆಲ-ಜಲದ ವಿಚಾರ ಬಂದಾಗ ಪಕ್ಷ ಭೇದ ಮರೆತು ಹೋರಾಟಕ್ಕೆ ಮುಂದಾಗುವ ಮತ್ತು ರೈತರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಆದರ್ಶ ನಾಯಕತ್ವಕ್ಕೆ ಮಾದರಿಯಾಗಿದ್ದಾರೆ. ಜನರ ಹಿತಕ್ಕಾಗಿ ಸೇವೆ ಸಲ್ಲಿಸುವ ಅವರು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಎಂ.ಮಲ್ಲೇಶ್ ಬಾಬು ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಕೃಷ್ಣಾ ನದಿ ನೀರಿನ ಕುರಿತಾಗಿ ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರದಿಂದ ಡಿ.ಪಿ.ಆರ್ ಮಾಡಿ ಕಳಿಸಿದರೆ ಒಂದು ವರ್ಷದಲ್ಲಿ ನಾಲ್ಕು ತಿಂಗಳು ಕೃಷ್ಣಾ ಪೆನ್ನಾರ್ ನೀರು ಕೊಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ಬಯಲುಸೀಮೆಗೆ ನೀರು ತರುವ ಕಾರ್ಯ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಆಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ, ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಡಿ.ವೆಂಕಟೇಶ್, ನಗರ ಘಟಕ ಅಧ್ಯಕ್ಷೆ ಮಂಜುಳಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕೋಲಾರ ಜಿಲ್ಲಾ ಜೆಡಿಎಸ್ ಮುಖಂಡ ವಕ್ಕಲ್ಲೇರಿ ರಾಮು, ಪೂಲಕುಂಟಹಳ್ಳಿ ರಘುನಾಥ ರೆಡ್ಡಿ, ಗಂಜಿಗುಂಟೆ ನರಸಿಂಹಮೂರ್ತಿ, ಇ.ತಿಮ್ಮಸಂದ್ರ ಶಿವಾರೆಡ್ಡಿ, ಜೆ.ವಿ.ಸದಾಶಿವ, ತಿಮ್ಮನಾಯಕನಹಳ್ಳಿ ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ತಾದೂರು ರಘು, ಆರ್.ಎ. ಉಮೇಶ್, ಎಸ್. ಎಂ. ರಮೇಶ್, ನಂದ ಕಿಶನ್, ರಾಘವೇಂದ್ರ ಹಾಜರಿದ್ದರು.