Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಜಮೀನುಗಳನ್ನು ಸ್ವಾನಪಡಿಸಿಕೊಂಡು ಕೈಗಾರಿಕೆಗಳನ್ನು ಆರಂಭಿಸುವಂತೆ ಒತ್ತಾಯಿಸಿ ಜಂಗಮಕೋಟೆ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯು ಜೂ.30 ರಂದು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಕೆಐಎಡಿಬಿ ರೈತಪರ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಮೆರವಣಿಗೆ ಮತ್ತು ಪ್ರತಿಭಟನೆಗೆ ದಲಿತ ಸಂಘಟನೆಗಳ ಒಕ್ಕೂಟ, ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಮಹಿಳಾ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀಬ್ಯಾಟರಾಯಸ್ವಾಮಿ ದೇವಾಲಯ ಆವರಣದಲ್ಲಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯ ಸಭೆ ನಡೆಸಿ ಸಭೆಯಲ್ಲಿ ಜೂ.30 ರಂದು ನಡೆಯುವ ಮೆರವಣಿಗೆ, ಪ್ರತಿಭಟನೆ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.
ಈ ಕುರಿತು ಜಂಗಮಕೋಟೆ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯ ಪ್ರತೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಅದಷ್ಟು ಬೇಗ ಕೆಐಎಡಿಬಿಯು ಜಮೀನಿನ ಸ್ವಾಧೀನ ಪ್ರಕ್ರಿಯೆ ನಡೆಸಿ ಕೈಗಾರಿಕೆಗಳನ್ನು ಆರಂಭಿಸಬೇಕು. ತಾಲ್ಲೂಕಿನ ಪ್ರತಿ ಮನೆಗೂ ಒಂದು ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.
ನಡಿಪಿನಾಯಕನಹಳ್ಳಿ ಗ್ರಾಮದ ರೈತ ಚನ್ನಕೃಷ್ಣಪ್ಪನ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ದ ಪ್ರಕರಣ ದಾಖಲಿಸಬೇಕು ಮತ್ತು ಚನ್ನಕೃಷ್ಣಪ್ಪನ ಮೇಲೆ ದಾಖಲಾಗಿರುವ ಸುಳ್ಳು ಕೇಸನ್ನು ರದ್ದುಪಡಿಸಬೇಕು. ಅನೇಕ ಮಂದಿ ರೈತರಿಗೆ ಆಸೆ ಆಮಿಷಗಳನ್ನು ಒಡ್ಡಿ ಪಿಎಸಿಎಲ್ ಕಂಪನಿಗೆ ಜಮೀನುಗಳನ್ನು ಜಿಪಿಎ ಮಾಡಿದ್ದು ಪಿಎಸಿಎಲ್ ಕಂಪನಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಪಿಎಸಿಎಲ್ ಕಂಪನಿಯು ಜಿಪಿಎ ಮಾಡಿಕೊಂಡ ಜಮೀನಿನ ಮೂಲ ಮಾಲೀಕರಿಗೆ ಕೆಐಎಡಿಬಿಯು ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜೂನ್ 30 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ನಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ತಾತಹಳ್ಳಿ ಚಲಪತಿ, ಕಸ್ತೂರಿ ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜನೇಯ, ಮಳಮಾಚನಹಳ್ಳಿ ರಾಮಾಂಜಿ, ಪ್ರದೀಪ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ಭಕ್ತರಹಳ್ಳಿ ವಿಶ್ವನಾಥ್, ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕಿ ನಾಗವೇಣಿ, ಮಾದಿಗ ದಂಡೋರ ಕೃಷ್ಣಪ್ಪ, ದಲಿತ ಮುಖಂಡರಾದ ಜೆ.ಎನ್.ಪ್ರಕಾಶ್, ರಾಮದಾಸ್, ರೈತ ಸಂಘದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಪ್ರದೀಪ್, ಈರಪ್ಪ, ಮಧು, ರಾಜೇಶ್, ಗಂಗಧರ್, ಮೂರ್ತಿ ಸಭೆಯಲ್ಲಿ ಭಾಗವಹಿಸಿದ್ದರು.