Home News ಶಿಡ್ಲಘಟ್ಟದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ಶಿಡ್ಲಘಟ್ಟದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

0
Sidlaghatta Kempegowda Jayanthi Celebration

Sidlaghatta : ಸಮಾಜಮುಖಿ ಬದುಕನ್ನು ರೂಪಿಸಿಕೊಳ್ಳುವಂತೆ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಡಬೇಕು. ದುಶ್ಚಟಗಳಿಂದ ದೂರವಿಟ್ಟು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಕುಮಾರ ಚಂದ್ರಶೇಖರನಾಥಸ್ವಾಮೀಜಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕು ಶ್ರೀಕೆಂಪೇಗೌಡರ ಜಯಂತ್ಯೋತ್ಸವ ಆಚರಣಾ ಸಮಿತಿಯಿಂದ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀಕೆಂಪೇಗೌಡರ 514 ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ನಮ್ಮ ಮಕ್ಕಳಿಗೆ ನಾವು ಉತ್ತಮ ಸಂಸ್ಕಾರ, ಒಳ್ಳೆಯ ವಿದ್ಯೆಯನ್ನು ನೀಡಿದರೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಉತ್ತಮ ಸಮಾಜವನ್ನು ಕಟ್ಟುತ್ತಾರೆ. ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವ ಯಂತ್ರಗಳಾಗಬೇಕೆಂದು ಬಯಸಬೇಡಿ ಎಂದು ಪೋಷಕರಿಗೆ ಕಿವಿ ಮಾತನ್ನು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖೆಯ ಶ್ರೀಮಂಗಳಾನಂದನಾಥ ಮಹಾಸ್ವಾಮಿ ಆಶೀರ್ವಚನ ನೀಡಿ, ಕೆಂಪೇಗೌಡರು ಎಲ್ಲ ಸಮುದಾಯಗಳ ಹಿತ ಹಾಗೂ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರಿನಂತ ಬೃಹತ್ ನಗರಕ್ಕೆ ಅಡಿಪಾಯ ಹಾಕಿದ ದೂರದೃಷ್ಟಿಯುಳ್ಳ ಮಹಾನ್ ನಾಯಕರು ಎಂದರು.

ಬೆಂಗಳೂರು ಇಂದು ಜಗತ್ತಿನಲ್ಲೆ ಬೃಹದಾಕಾರವಾದ ನಗರವಾಗಿ ಬೆಳೆದಿದೆ, ಇನ್ನೂ ಬೆಳೆಯಲಿದೆ. ಹಾಗೆಯೆ ನಾವೂ ಸಹ ಮಹಾತ್ವಾಕಾಂಕ್ಷೆ ಮತ್ತು ಉತ್ತಮ ಸಂಕಲ್ಪದೊಂದಿಗೆ ಒಳ್ಳೆಯ ಕೆಲಸಗಳನ್ನು ಕೈಗೆತ್ತಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.

ನಮ್ಮ ಮಠದಲ್ಲಿ ಎಲ್ಲ ವರ್ಗದ ಪ್ರತಿಭಾವಂತರಿಗೂ ಅವಕಾಶಗಳನ್ನು ಒದಗಿಸುವ ಮೂಲಕ ಶಿಕ್ಷಣಕ್ಕೆ, ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ವಿ.ಗೋಪಾಲಗೌಡ ಮಾತನಾಡಿ, ಈ ಭಾಗಕ್ಕೆ ಕೃಷಿಗಾಗಿ ನೀರನ್ನು ಹರಿಸುವ ನೀರಾವರಿ ಯೋಜನೆಗಳ ಜಾರಿಗೆ ಇದುವರೆಗೂ ಆಡಳಿತ ನಡೆಸಿದ, ಇದೀಗ ನಡೆಸುತ್ತಿರುವ ಸರ್ಕಾರಗಳು ನಿರೀಕ್ಷೆಯಂತೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊಳಚೆ ನೀರು ನಮಗೆ ಬೇಡ, ಶುದ್ಧ ನೀರು ಬೇಕು, ಈಗಾಗಲೆ ಕೊಳಚೆ ನೀರಿನಿಂದ ಅನೇಕ ಬೆಳೆಗಳಿಗೆ ರೋಗ ತಗಲುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸದೀಯ ಸರ್ಕಾರ ನಮಗೆ ಬೇಡ, ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವಂತ ಸರ್ಕಾರ ಬೇಕು. ಸರ್ಕಾರ, ಜನಪ್ರತಿನಿಧಿಗಳ ಆಡಳಿತ ವೈಖರಿ ಕುರಿತು ಬೇಸರ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ 100 ಪ್ರತಿಭಾವಂತರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಲಕ್ಷ್ಮೀನಾರಾಯಣರೆಡ್ಡಿ ಅವರು ತಲಾ 5 ಸಾವಿರ ನಗದು ಪುರಸ್ಕಾರ ನೀಡಿ ಸತ್ಕರಿಸಿದರು.

ಶಾಸಕ ಬಿ.ಎನ್.ರವಿಕುಮಾರ್, ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ, ಸೀಕಲ್ ರಾಮಚಂದ್ರಗೌಡ, ಒಕ್ಕಲಿಗರ ಸಂಘದ ಬಿ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಕೆ.ಲಕ್ಷ್ಮೀನಾರಾಯಣರೆಡ್ಡಿ, ಹಿರಿಯ ವಕೀಲ ಎಂ.ಪಾಪಿರೆಡ್ಡಿ ಇನ್ನಿತರೆ ಸಮುದಾಯದ ಮುಖಂಡರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version