Home News ಕಾರ್ಮಿಕರು ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು

ಕಾರ್ಮಿಕರು ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು

0
Sidlaghatta Law Awareness Programme

“ಯಾವುದೇ ನಿರ್ಮಾಣ ಕಾಮಗಾರಿ, ಕೈಗಾರಿಕೆ ಅಥವಾ ಕಾರ್ಖಾನೆಯ ಯಶಸ್ಸಿನ ಹಿಂದೆ ಕಾರ್ಮಿಕರ ಶ್ರಮ ಅಮೂಲ್ಯವಾದದ್ದು. ಆದರೆ ಅವರು ಈ ತನಕ ತಮ್ಮ ಶ್ರಮಕ್ಕೆ ತಕ್ಕ ಪಡೀ ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿರುವುದು ಖುಷಿಕರ ವಿಷಯವಲ್ಲ,” ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ರೋಷನ್ ಷಾ ವಿಷಾದ ವ್ಯಕ್ತಪಡಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾನೂನು ಅರಿವು – ನೆರವು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ, ಶಿಡ್ಲಘಟ್ಟ ವಕೀಲರ ಸಂಘ ಹಾಗೂ ಪೋಲಿಸ್ ಇಲಾಖೆ ಸಹಯೋಗದಿಂದ ಹಮ್ಮಿಕೊಳ್ಳಲಾಗಿತ್ತು.

“ಬೆಳಗ್ಗೆ ಸಂಜೆವರೆಗೂ ದುಡಿದರೂ ತಕ್ಕ ಕೂಲಿ ಸಿಗದೇ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿರ್ದಿಷ್ಟ ಕೆಲಸದ ಅವಧಿಯಿಲ್ಲ, ದುಡಿಮೆ ಹೆಚ್ಚು, ಅನುಕೂಲ ಕಡಿಮೆ – ಇವು ಇಂದಿನ ಕಾರ್ಮಿಕ ಪರಿಸ್ಥಿತಿಗಳು. ವಿಶೇಷವಾಗಿ ರೇಷ್ಮೆ ಉದ್ಯಮದಲ್ಲಿ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಿಲ್ಲದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ,” ಎಂದು ಅವರು ಗಮನಸೆಳೆದರು.

ಕಾರ್ಮಿಕರು ಸಂಘಟಿತರಾಗಿ, ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ ಅವರು, “೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸುವುದು ಕಾನೂನುಬದ್ಧ ಅಪರಾಧವಾಗಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದರು.

“ಜಾಬ್ ಕಾರ್ಡ್, ವಿಮಾ ಯೋಜನೆ, ಉಚಿತ ಚಿಕಿತ್ಸೆ, ಹಣಕಾಸು ನೆರವು – ಇವೆಲ್ಲಾ ಕಾರ್ಮಿಕರಿಗೆ ಲಭ್ಯವಿರುವ ಹಕ್ಕುಗಳು. ಪ್ರತಿಯೊಬ್ಬ ಕಾರ್ಮಿಕನು ಈ ಯೋಜನೆಗಳ ಬಗ್ಗೆ ತಿಳಿದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೂಜಾ ಜೆ. – ಪ್ರಧಾನ ಸಿವಿಲ್ ನ್ಯಾಯಾಧೀಶೆ, ರಂಜಿತಾ ಎಸ್. – ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ, ಬಿನು ವರ್ಗೀಸ್ – ಬಚಪನ್ ಬಚಾವೋ ಆಂದೋಲನ ರಾಜ್ಯ ಸಂಯೋಜಕ, ಎ.ನಾರಾಯಣಸ್ವಾಮಿ – ವಕೀಲರ ಸಂಘದ ಅಧ್ಯಕ್ಷ, ಸಿ.ಜಿ. ಭಾಸ್ಕರ್ – ಸಂಘದ ಕಾರ್ಯದರ್ಶಿ, ವಿವಿಧ ವಕೀಲರು, ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version