Melur, Sidlaghatta : ತಾಲ್ಲೂಕಿನ ಮೇಲೂರು ಗ್ರಾಮದ ಪುರಾತನ ಹಾಗೂ ಪ್ರಸಿದ್ಧ ದೇವಾಲಯವಾದ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರೆ ಜಲಜಲಾತ್ಮಕವಾಗಿ, ಶ್ರದ್ಧಾ ಭಕ್ತಿಯಿಂದ ಹಾಗೂ ಸಡಗರ ಸಂಭ್ರಮದ ನಡುವೆ ನೆರವೇರಿತು.
ಜಾತ್ರೆಯ ಅಂಗವಾಗಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಪೂಜಾ ವಿಧಿವಿಧಾನಗಳು, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆಯ ಮೂಲಕ ಧಾರ್ಮಿಕ ಆಚರಣೆ ನೆರವೇರಿತು. ಗ್ರಾಮದ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ತಂಬಿಟ್ಟು ಆರತಿಯನ್ನು ತಲೆಮೇಲೆ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ್ದು, ದೇವಾಲಯದ ಸುತ್ತಲೂ ಪ್ರದಕ್ಷಿಣಿ ಹಾಕಿ ದೀಪೋತ್ಸವದಲ್ಲಿ ಪಾಲ್ಗೊಂಡರು.
ದೀಪೋತ್ಸವದ ಸಂದರ್ಭದಲ್ಲಿ ಮೇಲೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಿಭಾವದಿಂದ ಭಾಗವಹಿಸಿ ದೇವತಾ ಕಾರ್ಯದಲ್ಲಿ ತೊಡಗಿದ್ದರು. ಜಾತ್ರೆಯ ಶೋಭೆ ಹೆಚ್ಚಿಸಲು ಗ್ರಾಮದಲ್ಲಿನ ಚೆಂಗಲರಾಯರೆಡ್ಡಿ ಸರ್ಕಲ್ ಸೇರಿದಂತೆ ಪ್ರಮುಖ ರಾಜಬೀದಿಗಳನ್ನು ವೈವಿಧ್ಯಮಯ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದ್ದು, ನೂರಾರು ಭಕ್ತರನ್ನು ಆಕರ್ಷಿಸಿತು.
ಬೃಹತ್ ತಮಟೆ ವಾದ್ಯ ಕಾರ್ಯಕ್ರಮದೊಂದಿಗೆ ಜಾತ್ರೆಯ ಉತ್ಸಾಹ ಹೆಚ್ಚಿತ್ತು. ಮೈಲಾಂಡಹಳ್ಳಿಯ ಬೆಂಗಳೂರು ತಂಡದ ತಮಟೆ ವಾದನಕ್ಕೆ ಯುವಕರು ಭಾವೋತ್ಸಾಹದಿಂದ ಕುಣಿದು ಸಂಭ್ರಮಿಸಿದರು.
ಸ್ಥಳೀಯರು ಪ್ರತಿವರ್ಷ ಮೇಲೂರುದ ಅಧಿದೇವತೆ ಶ್ರೀಗಂಗಮ್ಮ ತಾಯಿಯ ಮರಿ ಜಾತ್ರೆಯನ್ನು ಮಳೆ, ಬೆಳೆ ಹಾಗೂ ಶಾಂತಿ ನೆಮ್ಮದಿಗಾಗಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಭಕ್ತರು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ತಾಯಿಯ ದರ್ಶನ ಪಡೆದು ಧನ್ಯರಾದರು.
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.