ನಿವೃತ್ತ ಐ.ಪಿ.ಎಸ್ ಅಧಿಕಾರಿ ಕುಚ್ಚಣ್ಣ ಶ್ರೀನಿವಾಸನ್ ಮತ್ತು ಹಲವು ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ವಿ.ನಾರಾಯಣಸ್ವಾಮಿ, ಈ ಇಬ್ಬರೂ ಹಿರಿಯರು ವಿಭಿನ್ನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರೂ ಇಬ್ಬರನ್ನೂ ಜೊತೆಗೂಡಿಸಿದ್ದು ಶಿಡ್ಲಘಟ್ಟ ಮತ್ತು ಕಲೆ. ಶಿಡ್ಲಘಟ್ಟದಲ್ಲಿ ಬಾಲ್ಯ ಸ್ನೇಹಿತರಾಗಿ ಓದಿ ಬೆಳೆದ ಇಬ್ಬರೂ ಶೈಕ್ಷಣಿಕವಾಗಿ ಸಾಧನೆ ಮಾಡಿದರೂ ಹಲವು ಚಲನಚಿತ್ರಗಳು, ನಾಟಕಗಳು ಹಾಗೂ ಧಾರಾವಾಹಿಗಳ ನಿರ್ಮಾಣದ ಕಾರ್ಯದಲ್ಲಿ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದಲ್ಲಿ ಜೊತೆಗೂಡಿ ತೊಡಗಿಸಿಕೊಂಡಿದ್ದಾರೆ.
ಇದೀಗ ಇವರಿಬ್ಬರ ಸಹಭಾಗಿತ್ವದಲ್ಲಿ “ಎರಡು ಸಾವಿರದ ಇಪ್ಪತ್ತು ಗೋಪಿಕೆಯರು” ಎಂಬ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವನ್ನು ವಿ.ನಾರಾಯಣಸ್ವಾಮಿ ಅವರು ನಿರ್ದೇಶಿಸಿದರೆ, ನಿರ್ಮಾಣವನ್ನು ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ಮಾಡುತ್ತಿದ್ದಾರೆ. ಈ ಇಬ್ಬರೂ ಹಿರಿಯರು ಜೊತೆಗೂಡಿ ಈ ಚಲನಚಿತ್ರದ ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ರಚಿಸಿದ್ದಾರೆ.
1988 ರಲ್ಲಿವಿ.ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ ಕನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ ಅವರ ನಟನೆಯ ಮೊದಲ ಚಿತ್ರ “ಮಧುಮಾಸ” ಎಂಬ ಚಲನಚಿತ್ರದಲ್ಲಿಯೂ ನಿವೃತ್ತ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸನ್ ಕಥಾ ಸಾಹಿತ್ಯ ಒದಗಿಸಿದ್ದರು. 1993 ರಲ್ಲಿ “ಮೋಜಿನ ಮದುವೆ” ಎಂಬ ಚಲನಚಿತ್ರವನ್ನೂ ಸಹ ವಿ.ನಾರಾಯಣಸ್ವಾಮಿ ಅವರ ನಿರ್ದೇಶನದಲ್ಲಿ, ಕುಚ್ಚಣ್ಣ ಶ್ರೀನಿವಾಸನ್ ಅವರ ಕಥೆ, ಸಾಹಿತ್ಯದ ಸಹಕಾರದಲ್ಲಿ ನಿರ್ಮಾಣಗೊಂಡಿತ್ತು. ಆನಂತರ ಸಮಾಗಮ ಎಂಬ ದೂರದರ್ಶನ ಧಾರಾವಾಹಿ ಸೇರಿದಂತೆ ಹಲವು ನಾಟಕಗಳಲ್ಲಿ ಇಬ್ಬರೂ ಜೊತೆಯಾಗಿದ್ದರು. ಇದೀಗ 28 ವರ್ಷಗಳ ನಂತರ ಇಬ್ಬರ ಜೋಡಿ ಜೊತೆಗೂಡಿ “ಎರಡು ಸಾವಿರದ ಇಪ್ಪತ್ತು ಗೋಪಿಕೆಯರು” ಚಲನಚಿತ್ರವನ್ನು ನಿರ್ಮಾಣ ಮಾಡಿದೆ.
ವಿ.ನಾರಾಯಣಸ್ವಾಮಿ :

ಶಿಡ್ಲಘಟ್ಟದ ನಂಜಮ್ಮ ಮತ್ತು ವೆಂಕಟಶಾಮಪ್ಪ ದಂಪತಿಯ ಮಗ ವಿ.ನಾರಾಯಣಸ್ವಾಮಿ ಅವರು ಬಾಲ್ಯ ಶಿಕ್ಷಣವನ್ನು ಶಿಡ್ಲಘಟ್ಟದಲ್ಲಿ ಪೂರೈಸಿ ಬಿ.ಎಸ್.ಸಿ, ಬಿ.ಎಡ್ ಮತ್ತು ಎಂ.ಎಸ್.ಡಬ್ಲ್ಯೂ ಹಾಗೂ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ತರಬೇತಿಯನ್ನು ಬೆಂಗಳೂರಿನಲ್ಲಿ ಪೂರೈಸಿದರು. ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಇವರು ನಂತರ ಹಲವು ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವರು. “ಬೆಳುವಲದ ಮಡಿಲಲ್ಲಿ” ಚಲನಚಿತ್ರದಲ್ಲಿ ನಿರ್ದೇಶಕ ಗೀತಪ್ರಿಯ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮೂರು ಚಲನಚಿತ್ರಗಳನ್ನು ಹಾಗೂ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.
ಕುಚ್ಚಣ್ಣ ಶ್ರೀನಿವಾಸನ್ :

ವೆಂಕಟಲಕ್ಷಮ್ಮ ಮತ್ತು ಕುಚ್ಚಣ್ಣ ದಂಪತಿಯ ಮಗನಾದ ಕುಚ್ಚಣ್ಣ ಶ್ರೀನಿವಾಸನ್ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸವನ್ನು ಶಿಡ್ಲಘಟ್ಟದ ಸರ್ಕಾರಿ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ವಿರೂಪಾಕ್ಷಪ್ಪ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆದು, ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಬಿಎಸ್ಸಿ, ಎಂ.ಎಸ್.ಸಿ ಪೂರೈಸಿ ಮಳವಳ್ಳಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೆಲ ಕಾಲ ಕರ್ನಾಟಕ ಡೇರಿ ಅಭಿವೃದ್ಧಿ ಸಂಸ್ಥೆಯಲ್ಲಿಯೂ ಕೆಲಸ ನಿರ್ವಹಿಸಿದ ನಂತರ ಐಪಿಎಸ್ ಪರೀಕ್ಷೆ ಬರೆದು ಪೊಲೀಸ್ ಅಧಿಕಾರಿಯಾದರು. ಬಾಲ್ಯದಿಂದಲೂ ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಇವರು ಬಾಲ್ಯ ಸ್ನೇಹಿತ ವಿ. ನಾರಾಯಣಸ್ವಾಮಿ ಅವರ ಜೊತೆಗೂಡಿ ಚಲನಚಿತ್ರಗಳಿಗೆ ಹಾಗೂ ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ.