Sidlaghatta : ಶಿಡ್ಲಘಟ್ಟ ನಗರಸಭೆ ವತಿಯಿಂದ ಮಂಗಳವಾರ “ನನ್ನ ನಗರ ನನ್ನ ಜವಾಬ್ದಾರಿ” ಎಂಬ ಕಾರ್ಯಕ್ರಮವನ್ನು ನಗರಸಭಾ ಸಭಾಂಗಣದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ, ಸದಸ್ಯರ ನಾಯತ್ವ ಗುಣವನ್ನು ಬೆಳಸುವುದು ಹಾಗೂ ನಗರಾಭಿವೃದ್ಧಿಗೆ ಅವರು ಹೊರುವ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು.
ಸರ್ಕಾರದ ಜನಾಗ್ರಹ ಕಾರ್ಯಕ್ರಮದ ನಿರ್ವಾಹಕ ಎಲ್.ಮಂಜುನಾಥ ಹಂಪಾಪುರ ಈ ಸಂದರ್ಭದಲ್ಲಿ ಮಾತನಾಡಿದರು. ಅವರು, “ನಗರದ ಜನರು ವಾರ್ಡ್ ಸಮಿತಿ ಮತ್ತು ಏರಿಯಾ ಸಭೆಗಳ ಮೂಲಕ ನಗರಾಭಿವೃದ್ಧಿಗೆ ನೇರವಾಗಿ ಕೈಜೋಡಿಸಬಹುದು. ಇವು ಸ್ವಚ್ಛತೆ, ಕೆರೆ ಪುನಶ್ಚೇತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಗಳ ಪ್ರೋತ್ಸಾಹ ಸೇರಿದಂತೆ ಹಲವು ಅಭಿವೃದ್ಧಿ ಚಟುವಟಿಕೆಗಳಿಗೆ ದಾರಿತೋರಿಸುತ್ತವೆ” ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮವು ವಾರ್ಡ್ ಮಟ್ಟದ ನಿರ್ವಹಣಾ ವಿಧಾನ, ಪ್ರಜೆಗಳ ಪಾಲ್ಗೊಳ್ಳುವಿಕೆಗೆ ಅವಕಾಶ, ನಗರ ಆಡಳಿತದ ಜವಾಬ್ದಾರಿ ಹಾಗೂ ಸದಸ್ಯರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ. ಇಂತಹ ಕಾರ್ಯಕ್ರಮಗಳು ನಗರಸಭೆಯು ಪ್ರಜೆಗಳಿಗೆ ಇನ್ನಷ್ಟು ನಿಕಟವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವೆಂಕಟಸ್ವಾಮಿ, ಸದಸ್ಯರಾದ ಎಲ್.ಅನಿಲ್ ಕುಮಾರ್, ಚಿತ್ರಾ ಮನೋಹರ್, ಎಸ್.ಎಂ.ಮಂಜುನಾಥ್, ಜಬೀವುಲ್ಲಾ, ಕೃಷ್ಣಮೂರ್ತಿ, ಟಿ.ಮಂಜುನಾಥ್, ರಿಯಾಜ್ ಖಾನ್, ನಾರಾಯಣಸ್ವಾಮಿ, ನಗರಸಭೆ ವ್ಯವಸ್ಥಾಪಕಿ ರಾಜೇಶ್ವರಿ ಮತ್ತು ಸಮುದಾಯ ಅಧಿಕಾರಿ ಸುಧಾ ಉಪಸ್ಥಿತರಿದ್ದರು.