
Muttur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶಿಥಿಲಗೊಂಡಿರುವ ನೊಳಂಬರ ಕಾಲಕ್ಕೆ ಸೇರಿರುವ ಶಿವನ ದೇವಸ್ಥಾನ, ವೀರಗಲ್ಲು ಮತ್ತು ಶಾಸನವನ್ನು ನಿವಾಸ ಸಂಸ್ಥೆ, ಗ್ರಾಮಾಂತರ ಟ್ರಸ್ಟ್ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಪಾರಂಪರಿಕ ಪುನರುಜ್ಜೀವನ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಕೆಲವು ತಿಂಗಳ ಹಿಂದೆ ಪುರಾತತ್ವ ಇಲಾಖೆಯ ಗ್ರಾಮಾಂತರ ಸವೆ ಕಾರ್ಯವನ್ನು ನಡೆಸಿದ್ದ ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಎ.ಎಂ.ತ್ಯಾಗರಾಜ್ ಅವರು ಗ್ರಾಮದ ದೇವಸ್ಥಾನ, ವೀರಗಲ್ಲು ಮತ್ತು ಶಾಸನವನ್ನು ಅಧ್ಯಯನ ಮಾಡಿ, ಇದನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ವಿನಂತಿಸಿದ್ದರು.
ಈ ಹಿನ್ನೆಲೆಯಲ್ಲಿ ಮುತ್ತೂರು ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನು ಮಾಡುತ್ತಿರುವ ಗ್ರಾಮಾಂತರ ಟ್ರಸ್ಟ್ ಸಂಸ್ಥೆಯವರು ಮುಂದೆ ಬಂದು ಮಿಥಿಕ್ ಸೊಸೈಟಿ, ಸಂರಚನಾ ತಜ್ಞ ಇಂಜಿನಿಯರ್ ಪ್ರೊ.ರಘುನಾಥ್ ಮತ್ತು ಪುರಾತತ್ವ ಇಲಾಖೆಯವರ ಸಲಹೆ ಪಡೆದು, ನಿವಾಸ ಸಂಸ್ಥೆ ಮತ್ತು ದಾನಿಗಳ ನೆರವನ್ನು ಪಡೆದು ಪುನರುಜ್ಜೀವನ ಕಾರ್ಯಕ್ಕೆ ಮುಂದಾಗಿರುವರು.
ಈ ಸಂದರ್ಭದಲ್ಲಿ ದಾನಿಗಳಾದ ಲಲಿತ ಕಂದಸ್ವಾಮಿ, ರಮೇಶ್ ಸುಂದರೇಶನ್, ತಿರುವಣ್ಣಾಮಲೈ ಅರುಣಾಚಲರಮಣ ಆತ್ಮವಿದ್ಯಾಮಂದಿರದ ರಮಣಸ್ವರೂಪಾನಂದ ಸ್ವಾಮೀಜಿ, ಮೈಸೂರು ಮಹೇಶ್, ನಿವಾಸ ಸಂಸ್ಥೆ ಮತ್ತು ಗ್ರಾಮಾಂತರ ಟ್ರಸ್ಟ್ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.