Sidlaghatta : ಯುಗಾದಿಯಾದ ಒಂಬತ್ತನೇ ದಿನ ಆಚರಿಸುವ ರೈತರ ಹಬ್ಬವಾದ ಪೈರುಹಬ್ಬವನ್ನು ನಗರದ ದೇಶದಪೇಟೆಯಲ್ಲಿರುವ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಆಚರಿಸಿದರು.
ಯುಗಾದಿಯ ದಿನ ದೇವಾಲಯದಲ್ಲಿ ಬೇವು, ಬೆಲ್ಲ ಹಂಚಿ ಬಂದು ಮನೆಯಲ್ಲಿ ಅವರೆ, ಜೋಳ, ರಾಗಿ, ಹುರುಳಿ, ಹಲಸಂದಿ ಇತ್ಯಾದಿ ಧಾನ್ಯಗಳನ್ನು ಮಣ್ಣು ಮತ್ತು ಗೊಬ್ಬರದಲ್ಲಿ ಬೆರೆಸಿ ಇಡುತ್ತಾರೆ. ಜೊತೆಯಲ್ಲಿ ಹೊಸ ನೇಗಿಲನ್ನು ಇಟ್ಟು ಪೂಜಿಸಲಾಗುತ್ತದೆ. ರೈತರಿಗೆ ನೇಗಿಲು ಪೂಜನೀಯವಾದುದು. ಒಂಬತ್ತು ದಿನಗಳು ಪೂಜಿಸಿ ಒಂಬತ್ತನೇ ದಿವಸ ಶ್ರೀರಾಮನವಮಿಯಂದು ತಮ್ಮ ಜಮೀನಿನಲ್ಲಿ ನೀರು ಹರಿಯುವೆಡೆ ಪೈರನ್ನು ಬಿಡುತ್ತಾರೆ. ನಂತರ ಈ ನೇಗಿಲಿನಿಂದ ಉಳುತ್ತಾರೆ.
“ಮನೆಯಲ್ಲಿ ಪೈರು ಎಷ್ಟು ಚೆನ್ನಾಗಿ ಬೆಳೆದಿದ್ದರೆ ತಮ್ಮ ಜಮೀನಿನಲ್ಲಿ ಫಸಲು ಅಷ್ಟು ಚೆನ್ನಾಗಿ ಬರುವುದೆಂಬ ನಂಬಿಕೆ ರೈತರದು. ಈಗ ಟ್ರಾಕ್ಟರ್ ಮತ್ತು ಟಿಲ್ಲರ್ ಗಳ ಕಾಲ. ಹಾಗಾಗಿ ಈ ಹಬ್ಬವನ್ನು ಆಚರಿಸುವವರೇ ಕಡಿಮೆಯಾಗಿದ್ದಾರೆ. ಮೊದಲು ದೊಡ್ಡ ನೇಗಿಲನ್ನೇ ಪೂಜೆಗೆ ಇಡುತ್ತಿದ್ದವರು ನಂತರ ಸಾಂಕೇತಿಕವಾಗಿ ಜಾಲಿಮರದ ತುಂಡನ್ನು ಇಡಲು ಪ್ರಾಂಭಿಸಿದ್ದಾರೆ. ನಾವು ಮಾತ್ರ ಉತ್ತಮ ಜಾಲಿ ಮರದಲ್ಲಿ ಪ್ರತಿ ವರ್ಷ ಹೊಸ ನೇಗಿಲನ್ನು ಮಾಡಿಸಿ ಪೂಜಿಸಿ ನಂತರ ಉಳುಮೆ ಪ್ರಾರಂಭಿಸುತ್ತೇವೆ. ಈಗಲೂ ಹಳ್ಳಿಗಳಲ್ಲಿ ನೇಗಿಲನ್ನೇ ಇಟ್ಟು ಪೂಜಿಸುವರು ಕೆಲವರು ಇದ್ದಾರೆ” ಎನ್ನುತ್ತಾರೆ ಶೆಟ್ಟಪ್ಪನವರ ಎಸ್.ರವಿ.








