
Sidlaghatta : ಈ ಜಗತ್ತಿನಲ್ಲಿ ಜಾತಿ, ಧರ್ಮ, ಭಾಷೆ, ಗಡಿಗಳನ್ನು ಮೀರಿ ಎಲ್ಲರನ್ನೂ ಒಂದು ಕಡೆ ಸೇರಿಸುವ ಶಕ್ತಿ ಇದ್ದರೆ ಅದು ಕ್ರೀಡೆ, ಸಂಗೀತ, ಕಲೆಗಷ್ಟೆ ಇದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಫ್ಸರ್ಪಾಷ ಅಭಿಪ್ರಾಯಪಟ್ಟರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜೀವ್ಗೌಡ ರಂಜಾನ್ ಕಪ್ ಕ್ರಿಕೇಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ಕ್ರಿಕೆಟ್ ತಂಡಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಅವರು ಮಾತನಾಡಿದರು.
ಕ್ರಿಕೆಟ್, ಫುಟ್ ಬಾಲ್, ಕಬ್ಬಡ್ಡಿ ಇನ್ನಿತರೆ ಯಾವುದೆ ಕ್ರೀಡೆ ಆಗಲಿ, ಸಂಗೀತ, ಕಲೆಗಳಿಗೆ ಜಾತಿ, ಧರ್ಮ, ಭಾಷೆಯ ಹಂಗು ಇಲ್ಲ. ಅದು ಎಲ್ಲರನ್ನೂ ತಮ್ಮತ್ತ ಸೆಳೆಯುತ್ತದೆ. ಕ್ರೀಡೆಗಳು ಪರಸ್ಪರ ಸೌಹಾರ್ಧತೆ, ಸಾಮರಸ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ನಮ್ಮ ನಾಯಕರಾದ ರಾಜೀವ್ ಗೌಡರು ಯುವಕರಲ್ಲಿ ಕ್ರೀಡಾ ಸ್ಪೂರ್ತಿ, ಆಸಕ್ತಿಯನ್ನು ಹೆಚ್ಚಿಸಲು ರಂಜಾನ್ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದು ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಿದ್ದು ಅವರಿಗೆ ಎಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ರೈಸಿಂಗ್ ಸ್ಟಾರ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದ್ದು 20 ಸಾವಿರ ರೂ ನಗದು, ಟ್ರೋಪಿಯನ್ನು ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ ನಗದು, ಟ್ರೋಫಿ ಮತ್ತು ಭಾಗವಹಿಸಿದ್ದ ಎಲ್ಲ ತಂಡಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಕಾಂಗ್ರೆಸ್ ಮುಖಂಡರಾದ ನಾಗನರಸಿಂಹ, ಶ್ರೀನಾಥ್, ಕ್ರಿಕೆಟ್ ನ ಇತರೆ ತಂಡಗಳ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.