
Sidlaghatta : ರಾಜ್ಯದ ಪರಿಶಿಷ್ಠ ಪಂಗಡಕ್ಕೆ (Scheduled Tribes) ಶೇ 7.5 ಹಾಗೂ ಪರಿಶಿಷ್ಠ ಜಾತಿಗೆ (Scheduled Castes) ಶೇ 17 ರಷ್ಟು ಮೀಸಲಾತಿಯನ್ನು (Reservation) ನೀಡಲು ಸೆಪ್ಟೆಂಬರ್ 28 ರೊಳಗೆ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದಲ್ಲಿ ಸರ್ಕಾರ ಆಚರಿಸಲು ಉದ್ದೇಶಿಸಿರುವ 2022 ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಿರಸ್ಕರಿಸಿ, ಸಮುದಾಯದ ಎಲ್ಲರೂ ಸೇರಿ ಪೂಜ್ಯ ಶ್ರೀ ಪ್ರಸನ್ನಾನಂದ ಶ್ರೀಗಳ ನೇತೃತ್ವದಲ್ಲಿ ಫ್ರೀಡಂ ಪಾರ್ಕಿನಲ್ಲಿ ವಾಲ್ಮೀಕಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಅಕ್ಟೋಬರ್ 9 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಸಲುವಾಗಿ ತಾಲ್ಲೂಕು ಆಡಳಿತ ಪೂರ್ವ ಭಾವಿ ಸಭೆ ಕರೆದಿರುವುದು ಸ್ವಾಗತಾರ್ಹ, ಆದರೆ ಕಳೆದ 226 ದಿನಗಳಿಂದ ಸಮುದಾಯದ ಪೂಜ್ಯ ಗುರುಗಳಾದ ಶ್ರೀ ಪ್ರಸನ್ನಾನಂದ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಈಗಾಗಲೇ ಶ್ರೀಗಳು ಮೀಸಲಾತಿ ಪ್ರಕಟಿಸಲು ಸರ್ಕಾರಕ್ಕೆ ಸೆಪ್ಟೆಂಬರ್ 28 ರವರಗೂ ಸಮಯಾವಕಾಶ ನೀಡಿದ್ದಾರೆ. ಹಾಗಾಗಿ ಇದೇ ಸೆಪ್ಟೆಂಬರ್ 28 ರೊಳಗೆ ಸರ್ಕಾರ ಮೀಸಲಾತಿ ನೀಡಲು ಪ್ರಕಟಣೆ ಹೊರಡಿಸಬೇಕು. ಇಲ್ಲವಾದಲ್ಲಿ ಸರ್ಕಾರ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಿರಸ್ಕರಿಸಿ ಸಮುದಾಯದವರೆಲ್ಲರೂ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶ್ರೀಗಳ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ.
ಹಾಗಾಗಿ ತಮ್ಮ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದು ಏನೆಂದರೆ ಪರಿಶಿಷ್ಠರ ಬಗ್ಗೆ ಸಹೃದಯವಂತಿಕೆಯ ತೀರ್ಮಾನ ಸರ್ಕಾರ ಕೈಗೊಳ್ಳಬೇಕು, ಮೀಸಲಾತಿಯನ್ನು ಇದೇ ಸೆಪ್ಟೆಂಬರ್ 28 ರೊಳಗೆ ಪ್ರಕಟಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕು ಪಮ್ಚಾಯಿತಿ ಇಓ ಮುನಿರಾಜು, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಮುದಾಯದ ಮುಖಂಡರಾದ ಎನ್.ಮುನಿಯಪ್ಪ, ಮುಗಿಲಡಿಪಿ ನಂಜಪ್ಪ ಹಾಜರಿದ್ದರು.