ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿಯ ವ್ಯಾಪಾರಿಗಳ ಸಂಘದಿಂದ ಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿದರು.
ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸವಲತ್ತುಗಳು ಇನ್ನೂ ಸಿಗುತ್ತಿಲ್ಲ. ಬೀದಿ ಬದಿಯ ವ್ಯಾಪಾರಿಗಳಲ್ಲೂ ಜಾಗೃತಿ ಮೂಡಬೇಕಿದೆ. ಆಗಲೆ ಎಲ್ಲ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ದಿಯತ್ತ ಸಾಗಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲಕರ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅವುಗಳು ಎಲ್ಲ ಅರ್ಹರಿಗೂ ಸಿಗಲೆಂದು ಸಂಘವು ಶ್ರಮಿಸುತ್ತಿದೆ ಎಂದರು.
ಆದರೂ ಅನೇಕ ಮಂದಿ ಅನಕ್ಷರಸ್ಥರಾಗಿದ್ದು ಜಾಗೃತಿಯ ಕೊರತೆಯಿಂದ ಹಲವಾರು ಸವಲತ್ತುಗಳು ಸಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಬೇಸರದ ನಡುವೆಯೂ ಬೀದಿ ಬದಿಯ ವ್ಯಾಪಾರಿಗಳ ಸಂಘ ರಚನೆಯಾದ ಮೇಲೆ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗುತ್ತಿವೆ ಎಂದು ಹೇಳಿದರು.
ಸಂಘಟನೆಯು ಶಕ್ತಿಯುತವಾಗಿದ್ದಾಗ ಎಲ್ಲವನ್ನೂ ಕೇಳಿ ಪ್ರಶ್ನಿಸಿ ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ಸಂಘವನ್ನು ಇನ್ನಷ್ಟು ಬಲಗೊಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಲಿದ್ದೇವೆ. ಅದಲ್ಲೆ ಜನಪ್ರತಿನಿಧಿಗಳು, ಅಧಿಕಾರಿಗಳ ನೆರವು ಸಹಕಾರ ಬೇಕೆಂದು ಕೋರಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅವರು ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳಿಗೆ ಅಗತ್ಯ ಎಲ್ಲ ನೆರವು ನೀಡುವ ಭರವಸೆ ನೀಡಿ, ಬೀದಿ ಬದಿಯ ವ್ಯಾಪಾರಿಗಳ ದಿನಾಚರಣೆಯ ಶುಭಾಷಯಗಳನ್ನು ಕೋರಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ಮಾನವ ಹಕ್ಕುಗಳ ಕಮಿಟಿ ರಾಜ್ಯಾಧ್ಯಕ್ಷ ಬೈರೇಗೌಡ, ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಸ್ಲಂಪಾಷ, ಕಾರ್ಯ ನಿರ್ದೇಶಕ ಅಸ್ಲಂ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಇಲಿಯಾಜ್, ತಿಮ್ಮರಾಯಪ್ಪ, ಗೋಪಾಲ್, ಲಕ್ಷ್ಮಿ ಹಾಜರಿದ್ದರು.