ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಕ್ರಾಸ್ನ ಈರುಳ್ಳಿ ದಾಸ್ತಾನು ಮಳಿಗೆ ಆವರಣದಲ್ಲಿ ಬುಧವಾರ ನಡೆದ ಸಾದಲಮ್ಮ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ 6 ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆವಹಿಸಿ ಸಾದಲಿಯ ಸಾದಲಮ್ಮ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಡಿ.ಶ್ರೀನಿವಾಸ್ ಅವರು ಮಾತನಾಡಿದರು.
ಇಲ್ಲಿ ಎಲ್ಲ ಹಂತದಲ್ಲೂ ರೈತರ ನಿರ್ಧಾರವೇ ಅಂತಿಮ. ನಮ್ಮ ಉತ್ಪಾದನೆಗೆ ನಾವೇ ಬೆಲೆಯನ್ನು ನಿರ್ಧರಿಸಬೇಕು. ನಾವೇ ಮಾರುಕಟ್ಟೆಯನ್ನು ಮಾಡಬೇಕು. ಇದರಿಂದ ಉತ್ಪಾದಕರು ಹಾಗೂ ಗ್ರಾಹಕರ ನಡುವಿನ ಮದ್ಯವರ್ತಿಗಳ ಸಂಖ್ಯೆ ಕಡಿಮೆ ಆಗಲಿದ್ದು ಪೂರ್ಣ ಲಾಭಾಂಶ ನಮ್ಮ ಕಂಪನಿಯ ರೈತರಿಗೆ ಸಿಗಲಿದೆ. ಅದಕ್ಕಾಗಿಯೆ ಈ ರೈತ ಕಂಪನಿಯನ್ನು ಆರಂಭಿಸಿದ್ದು, ಮೂರು ವರ್ಷಗಳ ಕಾಲ ನಮಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡಿ ನಿರ್ವಹಣೆಯನ್ನೂ ಮಾಡಿದ್ದು, ಮೂರು ವರ್ಷಗಳ ನಂತರ ಕಂಪನಿಯ ಎಲ್ಲ ಹೊಣೆಯೂ ನಮ್ಮದೇ ಆಗಿದೆ. ಇಲ್ಲಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳೂ ಕಂಪನಿಯ ಸದಸ್ಯ ರೈತರದ್ದೇ ಆಗಿದೆ. ಅದಕ್ಕಾಗಿಯೆ ಎಲ್ಲ ರೈತರೂ ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿ ಕಂಪನಿಯ ಆರ್ಥಿಕ ಸ್ಥಿತಿಗತಿ ವಹಿವಾಟಿನ ವರದಿಯನ್ನು ಸಭೆಗೆ ಮಂಡಿಸಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೆಶಕ ಎನ್.ರಮೇಶ್ ಮಾತನಾಡಿ, ರಾಜ್ಯದಲ್ಲಿನ ಎಲ್ಲ ರೈತ ಉತ್ಪಾದಕ ಕಂಪನಿಗಳನ್ನು ಒಂದೇ ಬ್ರಾಂಡ್ನಡಿ ತರುವ ಕಾರ್ಯ ಶುರುವಾಗಿದೆ. ಇತ್ತೀಚೆಗೆ ಎಲ್ಲ ಕಂಪನಿಗಳ ಸಿಇಒಗಳ ಸಭೆ ನಡೆಸಲಾಗಿದೆ.
ಕೃಷಿ ತೋಟಗಾರಿಕೆ ಉತ್ಪನ್ನಗಳನ್ನು ಗುಣಮಟ್ಟದ ಗ್ರೇಡ್ನ ಆಧಾರದಲ್ಲಿ ಪ್ರತ್ಯೇಕಿಸಿ ಅವುಗಳಿಗೆ ಬ್ರಾಂಡ್ ನೀಡುವ ಕೆಲಸ ಆಗಬೇಕಿದೆ. ಆಗಲೆ ಉತ್ತಮ ಬೆಲೆಗೆ ಮಾರಾಟವಾಗಿ ರೈತರಿಗೆ ಸಿಗುವ ಲಾಭಾಂಶದ ಪ್ರಮಾಣವೂ ಹೆಚ್ಚಲಿದೆ ಎಂದು ಹೇಳಿದರು.
ಕಂಪನಿಯ ಬಗ್ಗೆ ಅನೇಕ ರೈತರಿಗೆ ಹಲವು ರೀತಿಯ ಅನುಮಾನಗಳು ಮೂಡಿವೆ. ಕಂಪನಿಯ ಉಪಯೋಗ ಸಧ್ಯಕ್ಕೆ ನಿಮಗೆ ಸಿಗುವುದಿಲ್ಲ. ಅದಕ್ಕಾಗಿ ಕಂಪನಿ ಕುರಿತು ಅನುಮಾನಗಳು ಸಹಜ. ಆದರೆ ಭವಿಷ್ಯದಲ್ಲಿ ಉಪಯೋಗಗಳು ಹೆಚ್ಚು ಸಿಗಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಕೆಲ ಸದಸ್ಯರು ಕಂಪನಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತೀರ್ಮಾನಗಳು ಎಲ್ಲ ಸದಸ್ಯರಿಗೂ ತಿಳಿದು ಬರುತ್ತಿಲ್ಲ. ಕೆಲವೊಬ್ಬರಿಗಷ್ಟೆ ತಿಳಿಯುತ್ತಿವೆ, ಸಭೆಯ ಆಹ್ವಾನ ಪತ್ರವೂ ಎಲ್ಲರಿಗೂ ತಲುಪಿಲ್ಲ ಎಂದು ಕೆಲ ರೈತರು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಕಂಪನಿಯ ಅಧ್ಯಕ್ಷ ಡಿ.ಶ್ರೀನಿವಾಸ್, ಈರುಳ್ಳಿಯ ಬಿತ್ತನೆ ಬೀಜವನ್ನು ಕೆಲ ರೈತರಿಗೆ ವಿತರಿಸಲಾಗಿದೆ. ಯಾರೂ ಉತ್ತಮವಾಗಿ ಬೆಳೆಯುತ್ತಾರೋ ಅವರಿಗಷ್ಟೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಗಮನಕ್ಕೆ ತರಲಾಗುವುದು.
ಇನ್ನು ಆಹ್ವಾನ ಪತ್ರಿಕೆಯನ್ನು ಸಮಯದ ಕೊರತೆಯಿಂದ ಕೆಲವೊಬ್ಬರಿಗೆ ತಲುಪಿಸಲಾಗಲಿಲ್ಲ ಮುಂದಿನ ದಿನಗಳಲ್ಲಿ ಅಂತಹ ಅಚಾತುರ್ಯಗಳು ಆಗದಂತೆ ಮುನ್ನೆಚ್ಚರಿಕೆವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಂಪನಿಯ ಸಿಇಒ ಕೆ.ಎಸ್.ಅನಿತ, ಉಪಾಧ್ಯಕ್ಷರಾದ ಡಿ.ವಿ.ರಂಗಪ್ಪ, ನಿರ್ದೆಶಕರಾದ ಮುನಿರೆಡ್ಡಿ, ಎಸ್.ವಿ.ಶ್ರೀನಿವಾಸ್, ಎಸ್.ಜಿ.ಗಂಗಾಧರಪ್ಪ, ಹನುಮಪ್ಪ, ಮುದ್ದರೆಡ್ಡಿ, ಬಿ.ನಾರಾಯಣಪ್ಪ, ಎನ್.ಮುನಿಯಪ್ಪ,ಎಸ್.ಎಂ.ವೆಂಕಟರೆಡ್ಡಿ, ಆಂಜನೇಯ, ನಾಗರಾಜ್, ನಾರಾಯಣಸ್ವಾಮಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi