ನಗರದ ಬೆಸ್ಕಾಂ ಇಲಾಖೆಯ ಕಚೇರಿಯ ಮುಂದೆ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಮಾತನಾಡಿದರು.
ಬೆಸ್ಕಾಂ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ವೋಲ್ಟೇಜ್ ವ್ಯತ್ಯಯದಿಂದ ಹಲವು ರೈತರ ಕೊಳವೆಬಾವಿಗಳ ಮೋಟರ್ ಪಂಪ್ ಸುಟ್ಟುಹೋಗಿವೆ. ರೈತರ ಬೆಳೆ ನಷ್ಟ ಹಾಗೂ ಮೋಟರ್ ಪಂಪ್ ರಿಪೇರಿ ಖರ್ಚನ್ನು ಬೆಸ್ಕಾಂ ಇಲಾಖೆಯ ಅಧಿಕಾರಿಗಳೇ ಭರಿಸಬೇಕು ಮತ್ತು ವೋಲ್ಟೇಜ್ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಳೆದ ಇಪ್ಪತ್ತು ದಿನಗಳ ಹಿಂದೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಬಂದು ವೋಲ್ಟೇಜ್ ವ್ಯತ್ಯಯದಿಂದ ಮೋಟರ್ ಪಂಪ್ ಸುಟ್ಟುಹೋಗುತ್ತಿರುವ ಬಗ್ಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೆವು. ನಾಲ್ಕು ದಿನಗಳ ಕಾಲಾವಕಾಶ ಕೊಡಿ ಸರಿಪಡಿಸುತ್ತೇವೆ ಎಂದಿದ್ದರು. ಆದರೆ ಇಪತ್ತು ದಿನಗಳು ಕಳೆದವು ಹಾಗೆಯೇ ಹಲವಾರು ಮೋಟರ್ ಪಂಪ್ ಗಳು ಸುಟ್ಟುಹೋದವು. ಹಾಗೆಯೇ ನೀರಿಲ್ಲದೆ ರೈತರು ಅಪಾರ ನಷ್ಟ ಸಹ ಅನುಭವಿಸುವಂತಾಯಿತು. ಶೆಟ್ಟಹಳ್ಳಿ, ಕೋಟಹಳ್ಳಿ, ಮಲ್ಲಹಳ್ಳಿ ಭಾಗದ ರೈತರು ಸುಟ್ಟು ಹೋದ ಸುಮಾರು ಇಪ್ಪತ್ತು ಮೋಟರ್ ಪಂಪ್ ಗಳನ್ನು ಹೊತ್ತು ತಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಹೊಣೆಗಾರರಾದ ಅಧಿಕಾರಿಗಳು ನಷ್ಟ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಬೆಸ್ಕಾಂ ಇಲಾಖೆಯ ಎಒಒ ಪ್ರಭು ಮಾತನಾಡಿ, ನಾಳೆಯೇ ವೋಲ್ಟೇಜ್ ವ್ಯತ್ಯಯ ಆಗುವುದನ್ನು ಸರಿಪಡಿಸುತ್ತೇವೆ. ನಷ್ಟ ಪರಿಹಾರ ಕೊಡಲು ನಮಗೆ ಅಧಿಕಾರವಿಲ್ಲ. ನೀವು ಆಗಿರುವ ನಷ್ಟದ ಬಗ್ಗೆ ಪತ್ರವನ್ನು ನೀಡಿದರೆ ನಾವು ಮೇಲಧಿಕಾರಿಗಳಿಗೆ ಕಳುಹಿಸಿ ಪರಿಹಾರ ಸಿಗಲು ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಸ್ಕಾಂ ಇಲಾಖೆಯ ಜೆ ಇ ವಿಜಯಕುಮಾರ್, ಡಿ.ಎನ್.ಶ್ರೀನಿವಾಸ್, ಪಿ.ಎನ್.ಶ್ರೀನಿವಾಸ್, ಶ್ರೀಧರ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರಾದ ಮುನಿನಂಜಪ್ಪ, ರಾಮಚಂದ್ರಪ್ಪ, ರಮೇಶ್, ಕೆಂಪಣ್ಣ, ಬಸವರಾಜು, ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಮಂಜುನಾಥ್, ಶೆಟ್ಟಹಳ್ಳಿ, ಕೋಟಹಳ್ಳಿ, ಮಲ್ಲಹಳ್ಳಿ ಭಾಗದ ನಷ್ಟಕ್ಕೊಳಗಾದ ರೈತರಾದ ಬಚ್ಚೇಗೌಡ, ಈಶ್ವರ್, ಗೌಡ ಹಾಜರಿದ್ದರು.