
Sidlaghatta : ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರವು ಪಾತ್ರ ಮಹತ್ತರವಾಗಿದೆ. ಆದ್ದರಿಂದ ಅವರಲ್ಲಿ ಶಿಸ್ತು, ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಮೈಗೂಡಿಸಿ, ದೇಶದ ಆಸ್ತಿಗಳನ್ನಾಗಿ ರೂಪಿಸಬೇಕಿದೆ ಎಂದು ಶ್ರೀಸಾಯಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯ ಅಧ್ಯಕ್ಷೆ ದೀಪಾ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಕ್ರಾಸ್ ನಲ್ಲಿರುವ ಶ್ರೀಸಾಯಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ, ನರ್ಸರಿ, ಎಲ್.ಕೆ.ಜಿ ಹಾಗೂ ಯುಕೆಜಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂದೆ-ತಾಯಿ ಮಕ್ಕಳು ಸಜ್ಜನರಾಗಿ ಬೆಳೆಯಲು ಉತ್ತಮ ವಾತಾವರಣ ಕಲ್ಪಿಸಬೇಕು. ಅವರಿಗೆ ಮಹನೀಯರ ಕಥೆಗಳನ್ನು ಹೇಳಿ ಅವರ ಆದರ್ಶಗಳನ್ನು ಮಕ್ಕಳಲ್ಲಿ ಮೈಗೂಡಿಸಬೇಕೆಂದು ಹೇಳಿದರು.
ಶಾಲೆಯಿಂದ ಬರುವ ಮಕ್ಕಳಿಗೆ ಮನೆಯಲ್ಲಿ ಸರಿಯಾಗಿ ಪಾಠ ಕಲಿಸಬೇಕು. ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಜಗಳವಾಡಬಾರದು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ತಾಯಿಯ ಪಾತ್ರ ನಿರಂತರವಾಗಿರಬೇಕು. ತಾಯಿಯಿಂದ ಪ್ರಾರಂಭವಾದ ಪಾಠದಿಂದ ಮಕ್ಕಳು ಸರಿಯಾದ ದಾರಿಯಲ್ಲಿ ಸಾಗಿದರೆ, ಅತ್ಯುನ್ನತ ಸ್ಥಾನ ತಲುಪಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಮರು ಎನ್ನುವ ಬೇಧಭಾವವಿಲ್ಲದೆ, ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಶಾಲೆಯ ಸಂಸ್ಥಾಪಕ ಮಂಜುನಾಥ್, ಮುಖ್ಯ ಶಿಕ್ಷಕರಾದ ಪ್ರೀತಿ, ಮುಬಾರಕ್, ಸಹಶಿಕ್ಷಕರಾದ ಅಮರಾವತಿ, ಭೂಮಿಕ, ಅಕೋನ, ರೂಥ್, ಕಲಾವತಿ, ನಾಗೇಂದ್ರ, ನಾಗಮಣಿ, ಬಿಂದು, ಪ್ರಿಯಾಂಕ, ಶ್ರೀನಿವಾಸ್, ಸುಷ್ಮಾ, ಉಷಾ, ಸರಿತ, ನವೀನ್ ಕುಮಾರ್, ಸೌಮ್ಯ, ಅಭಯ ಹಾಜರಿದ್ದರು.