Sidlaghatta : ಶಿಡ್ಲಘಟ್ಟ ನಗರದ ಶ್ರೀ ಕಾಳಿಕಾಂಬ ಕಾಮಠೇಶ್ವರ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಕರ್ಮ ಸಮುದಾಯದಿಂದ ಶ್ರೀಮತ್ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮಿಗಳವರ 30ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಭಾನುವಾರ ಭಕ್ತಿಭಾವದಿಂದ ನೆರವೇರಿತು.
ಶಿಡ್ಲಘಟ್ಟ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ಕಾಳಿಕಾಂಬ ಕಾಮಠೇಶ್ವರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ವಿಶ್ವಕರ್ಮ ಕುಲಬಾಂಧವರು ಒಟ್ಟಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.
ಈ ವರ್ಷದ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಸುಮಾರು 23 ಮಕ್ಕಳಿಗೆ ಸಾಮೂಹಿಕವಾಗಿ ಉಚಿತ ಉಪನಯನ ಕಾರ್ಯಕ್ರಮವನ್ನು ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಉಪನಯನಕ್ಕೆ ಸಂಬಂಧಿಸಿದ ವಿಧಿವಿಧಾನಗಳು ಶನಿವಾರ ಸಂಜೆಯಿಂದಲೇ ಆರಂಭಗೊಂಡು, ಪೋಷಕರೊಂದಿಗೆ ಮಕ್ಕಳು ದೇವಸ್ಥಾನದಲ್ಲಿ ತಂಗಿದ್ದು ಬೆಳಗಿನ ಜಾವವರೆಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಇದೇ ವೇಳೆ ಹೋಮ ಹವನ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಿಸಲಾಯಿತು. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಹಾಗೂ ಜನರ ಸುಖಶಾಂತಿಗಾಗಿ ಭಗವಂತನಲ್ಲಿ ಪ್ರಾರ್ಥಿಸಲಾಯಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಎಂ.ವಿ. ಅಶೋಕ ಚಾರ್, ಸುಬ್ಬಣ್ಣ ಚಾರ್, ಬಿ.ಕೆ. ಮುನಿರತ್ನಾಚಾರ್, ಅಮರನಾರಾಯಣಚಾರ್, ಆರ್. ಜಗದೀಶ್ ಕುಮಾರ್, ಕೃಷ್ಣ ಚಾರ್ ಸೇರಿದಂತೆ ಶ್ರೀ ಕಾಳಿಕಾಂಬ ಕಾಮಠೇಶ್ವರಸ್ವಾಮಿ ಸೇವಾ ಟ್ರಸ್ಟ್, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಳಿ, ಕಾಳಿಕಾಂಬ ಕಾಮಟೇಶ್ವರಸ್ವಾಮಿ ಯುವಕ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.








