Sidlaghatta : ಗುರುವಾರ ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ರೈತರು ಬೆಳೆದಿದ್ದ ಲಕ್ಷಾಂತರ ರೂ ಬೆಲೆ ಬಾಳುವ ಮಾವು ಹಾಗೂ ದ್ರಾಕ್ಷಿ ನೆಲಕ್ಕುರುಳಿದೆ.
ತಾಲ್ಲೂಕಿನ ಕೆ.ಮತ್ತುಕದಹಳ್ಳಿ, ಕನ್ನಮಂಗಲ, ಚಿಂತಡಿಪಿ, ಆಲಸೂರು ದಿನ್ನೆ, ಗೊರಮಡುಗು, ಜಂಗಮಶೀಗೆಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಯಿಂದ ತೋಟಗಾರಿಕೆ ಬೆಳೆಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿವೆ.
ಮಾವಿನ ತೋಪುಗಳಲ್ಲಿ ಮರ ತುಂಬಿಕೊಂಡಿದ್ದ ಕಾಯಿಗಳು ಬಿರುಗಾಳಿಯ ಹೊಡೆತಕ್ಕೆ ನೆಲಕ್ಕುರುಳಿದ್ದು, ದ್ರಾಕ್ಷಿ ತೋಟಗಳಲ್ಲೂ ಗೊಂಚಲುಗಳು ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಾವು ಬೆಳೆಗಾಗಿ ಈಗಾಗಲೇ ರಾಸಾಯನಿಕ ಸಿಂಪಡಣೆ, ನೀರಾವರಿ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈ ಬಾರಿ ಉತ್ತಮ ಉತ್ಪಾದನೆ ನಿರೀಕ್ಷಿಸಿದ್ದ ರೈತರು ಬೆಳೆ ನೆಲಪಾಲಾಗಿರುವುದರಿಂದ ಕಂಗಾಲಾಗಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಧಾವಿಸಿ ಪರಿಹಾರ ಕಾರ್ಯವನ್ನು ರೂಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.








