Sidlaghatta : ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ತಾಲ್ಲೂಕು ಆಡಳಿತದಲ್ಲಿ ನಿರ್ವಹಿಸುವಂತಹ ಪ್ರತಿ ನಿತ್ಯದ ಕಾರ್ಯಗಳು ಸುಗಮವಾಗಿ ನಡೆಯಲಿ ಎನ್ನುವ ಉದ್ದೇಶದಿಂದ ಸಾರ್ವಜನಿಕರ ಕುಂದುಕೊರತೆಗಳ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರು ತಾಲ್ಲೂಕು ಕಚೇರಿಗೆ ವಿವಿಧ ಕಾರಣಗಳಿಗಾಗಿ ಅಲೆದಾಡುವುದನ್ನು ಈಗ ತಪ್ಪಿಸಲಾಗಿದೆ. ಅನಗತ್ಯವಾಗಿ ಸಾರ್ವಜನಿಕರು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಹಾಗೂ ಕಚೇರಿಯ ಸಿಬ್ಬಂದಿ ಕೂಡ ಕಿರಿಕಿರಿಗೆ ಒಳಗಾಗದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿಯೇ ಕುಂದುಕೊರತೆಗಳ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ಕುಂದುಕೊರತೆಗಳ ಕೇಂದ್ರದಲ್ಲಿ ಯಾರು ಅರ್ಜಿಗಳನ್ನು ಹಾಕಿದ್ದಾರೆ, ಎಷ್ಟು ದಿನದಿಂದ ಅವರ ಅರ್ಜಿ ಹಾಗೆಯೇ ಉಳಿದಿದೆ ಎಂದು ರಿಜಿಸ್ಟರ್ ಪುಸ್ತಕದಲ್ಲಿ ಬರೆಯಲೆಂದು ಕೇಂದ್ರದಲ್ಲಿ ಒಬ್ಬ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ. ಅವರಲ್ಲಿ ಅರ್ಜಿದಾರನ ಮೊಬೈಲ್ ನಂಬರ್ ಹಾಗೂ ಅರ್ಜಿ ಹಾಕಿರುವ ಜರಾಕ್ಸ್ ಪ್ರತಿ ಹಾಗೂ ವಿಷಯವನ್ನು ನಮೂದಿಸಲಾಗುತ್ತದೆ. ಪ್ರತಿ ನಿತ್ಯ ಸಂಜೆ ಒಳಗೆ ಅವುಗಳನ್ನು ಪರಿಶೀಲಿಸಿ ಸಬಂಧಪಟ್ಟ ವಿಷಯ ನಿರ್ವಾಹಕರಿಗೆ ಸೂಚಿಸಿ ಕೂಡಲೆ ಅದರ ಬಗ್ಗೆ ಕ್ರಮ ಕೈಗೊಳ್ಲಲಾಗುತ್ತದೆ. ಇದರಿಂದ ಯಾವ ವಿಷಯ ನಿರ್ವಾಹಕರು ತುಂಬಾ ಫೈಲ್ಗಳು ಪೆಂಡಿಂಗ್ ಇಡುತ್ತಾರೆ, ಯಾರ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತವೆ ಎಂಬ ಮಾಹಿತಿ ದೊರೆಯುತ್ತದೆ . ಇದರಿಂದ ತಾಲ್ಲೂಕು ಆಡಳಿತ ಸುಗಮವಾಗಿ ನಡೆಸಲಿಕ್ಕೆ ಮತ್ತು ತ್ವರಿತವಾಗಿ ಕಾರ್ಯಗಳನ್ನು ಮಾಡಲು ಅವಕಾಶ ಸಿಗುತ್ತದೆ. ಈ ಸದುದ್ದೇಶದಿಂದ ಸಾರ್ವಜಿಕರ ಕುಂದುಕೊರತೆಗಳ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸಾರ್ವಜನಿಕರು ತಾವೇ ನನ್ನನ್ನು ಭೇಟಿ ಮಾಡಲೇಬೇಕು ಎನ್ನುವುದಾದರೆ ಮಧ್ಯಾಹ್ನ 3 ಗಂಟೆ ನಂತರ ಭೇಟಿ ಮಾಡಲು ಅವಕಾಶವಿದೆ. ಅರ್ಜಿಯ ಜೆರಾಕ್ಸ್ ಪ್ರತಿಯನ್ನು ಕೇಂದ್ರದಲ್ಲಿ ಕೊಟ್ಟಲ್ಲಿ ಅ ಅರ್ಜಿಯನ್ನು ಪರಿಶೀಲಿಸಿ 24 ಗಂಟೆಗಳಲ್ಲಿ ಕಚೇರಿಯಿಂದ ಕರೆ ಮಾಡಿ ಅದರ ಸಂಬಂಧ ಪಟ್ಟಂತೆ ಮಾಹಿತಿ ನೀಡುತ್ತಾರೆ. ಅವಕಾಶ ಇದ್ದಲ್ಲಿ ಕೂಡಲೆ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.