Home News ಶಿಡ್ಲಘಟ್ಟದಲ್ಲಿ ಭಕ್ತಿಪೂರ್ಣವಾಗಿ ವಿಶ್ವಕರ್ಮ ಜಯಂತಿ ಆಚರಣೆ

ಶಿಡ್ಲಘಟ್ಟದಲ್ಲಿ ಭಕ್ತಿಪೂರ್ಣವಾಗಿ ವಿಶ್ವಕರ್ಮ ಜಯಂತಿ ಆಚರಣೆ

0

Sidlaghatta : ವಿಶ್ವಕರ್ಮರನ್ನು ದೇವತ್ವ ಪಡೆದ ದೈವಿಕ ವಾಸ್ತುಶಿಲ್ಪಿ ಹಾಗೂ ಸೃಷ್ಟಿಕರ್ತರೆಂದು ಪೂಜಿಸಲಾಗುತ್ತಿದ್ದು, ಇಡೀ ಮನುಕುಲಕ್ಕೆ ನೀಡಿರುವ ಅವರ ಕೊಡುಗೆಯಿಂದಾಗಿ ಎಲ್ಲ ಸಮುದಾಯಗಳಿಗೂ ದೈವ ಸಮಾನರು ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಋಗ್ವೇದ ಹಾಗೂ ಪುರಾಣಗಳಲ್ಲಿ ವಿಶ್ವಕರ್ಮರನ್ನು ಸರ್ವಶಕ್ತಿಶಾಲಿ ಕರ್ತೃ ಹಾಗೂ ಶ್ರೇಷ್ಠ ವಾಸ್ತುಶಿಲ್ಪಿಯಾಗಿ ವರ್ಣಿಸಲಾಗಿದೆ. ಲಂಕಾ, ದ್ವಾರಕಾ, ಇಂದ್ರಪ್ರಸ್ಥದಂತಹ ಮಹಾನಗರಗಳನ್ನು ನಿರ್ಮಿಸಿದವರು ವಿಶ್ವಕರ್ಮ. ಮನೆ-ಮಂದಿರಗಳ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಅಪ್ರತಿಮ ಕೊಡುಗೆಯಿದೆ” ಎಂದರು.

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, “ಲೋಕವನ್ನು ವೈಭವೀಕರಿಸಿದ ಸಾಂಸ್ಕೃತಿಕ ಪರಂಪರೆ, ಕಲೆ ಹಾಗೂ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ” ಎಂದು ಶ್ಲಾಘಿಸಿದರು. ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು, ಪ್ರತಿದಿನ ಜನರು ಬಳಸುವ ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟ, ಗೃಹೋಪಯೋಗಿ ವಸ್ತುಗಳು ಹಾಗೂ ಸ್ಮಾರಕಗಳಲ್ಲಿಯೂ ವಿಶ್ವಕರ್ಮರ ಕಲೆಯ ಅಸ್ತಿತ್ವ ಜೀವಂತವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಚಾರಿ, “ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಿಶ್ವಕರ್ಮ ಜಯಂತಿಯನ್ನು ಶುದ್ಧತೆ, ಪ್ರತಿಭೆ ಮತ್ತು ಕಲಾ-ವೈಜ್ಞಾನಿಕ ಸಾಧನೆಗಳ ಮಾದರಿ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಐದು ಪ್ರಮುಖ ಕಸುಬುಗಳ ಸಾಧಕರಾದ ಆಂಜನೇಯಾಚಾರಿ (ಚಿನ್ನ-ಬೆಳ್ಳಿ), ನಂಜುಂಡಾಚಾರಿ (ಕಬ್ಬಿಣ), ಸುಬ್ರಮಣ್ಯಾಚಾರಿ (ಶಿಲ್ಪ), ಮಂಜುನಾಥ್ (ಲೋಹ ಬೆಸುಗೆ) ಮತ್ತು ವೆಂಕಟಾಚಾರಿ (ಬಡಗಿ) ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಮಟ್ಟದಲ್ಲಿ ಮೆಚ್ಚುಗೆ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣರಾಜು, ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version