
Sidlaghatta : “ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ಭಾಷೆ ಮತ್ತು ವಿಷಯಗಳನ್ನು ಕಲಿಯುವುದು ಎಷ್ಟು ಮುಖ್ಯವೋ, ಅದರ ಜೊತೆಗೆ ಕೃಷಿ ವಿದ್ಯೆಯನ್ನು ಕಲಿಯುವುದು ಅಷ್ಟೇ ಅನಿವಾರ್ಯ. ಈ ಜಗತ್ತಿನ ಎಲ್ಲ ಕಸುಬುಗಳಿಗಿಂತ ಕೃಷಿ ಕೆಲಸ ಅತ್ಯಂತ ಶ್ರೇಷ್ಠವಾದುದು,” ಎಂದು ಖ್ಯಾತ ವೈದ್ಯ ಡಾ.ಸತ್ಯನಾರಾಯಣರಾವ್ ತಿಳಿಸಿದರು.
ನಗರದ ಹೊರವಲಯದ ಹಂಡಿಗನಾಳ ಸಮೀಪವಿರುವ ಬಾಲಾಜಿ ಕನ್ವೆಂಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಸಿಟಿಜನ್ ಶಾಲೆಯ ದಶಮಾನೋತ್ಸವ (Citizen School Tenth Anniversary) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾರತವು ಯುವಶಕ್ತಿಯ ಆಗರವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿದೆ. ದೇಶದಲ್ಲಿ ಕ್ಷಿಪ್ರ ಬದಲಾವಣೆ ತರುವ ಶಕ್ತಿ ಕೇವಲ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಮಾತ್ರ ಇದೆ ಎಂದು ಅವರು ಅಭಿಪ್ರಾಯಪಟ್ಟರು.
“ನಾವು ಕೇವಲ ಪಠ್ಯದ ಜ್ಞಾನಕ್ಕೆ ಸೀಮಿತವಾಗಬಾರದು. ಹೆತ್ತವರು, ಗುರುಗಳು, ಹಿರಿಯರು ಮತ್ತು ನಮಗೆ ಅನ್ನ ನೀಡುವ ಈ ಮಣ್ಣಿಗೆ ಗೌರವ ನೀಡುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಟಿಜನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶಾಲೆಯ ಹತ್ತು ವರ್ಷಗಳ ಶೈಕ್ಷಣಿಕ ಸಾಧನೆಗಳನ್ನು ಪ್ರದರ್ಶಿಸಲಾಯಿತು. ಮಕ್ಕಳಿಂದ ನಡೆದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎನ್.ಶಿವಣ್ಣ, ಸಂಸ್ಥೆಯ ಮುಖ್ಯಸ್ಥೆ ಮಂಗಳಮ್ಮ ಹಾಗೂ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.