Home News ವಾಲ್ಮೀಕಿ ನಾಯಕ ಸಮುದಾಯವು ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಪಾಲ್ಗೊಂಡಿದೆ

ವಾಲ್ಮೀಕಿ ನಾಯಕ ಸಮುದಾಯವು ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಪಾಲ್ಗೊಂಡಿದೆ

0
Sugaturu Government School Valmiki Jayanti

Sugaturu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾಶಿಕ್ಷಣ ಇಲಾಖೆ, ವಾಲ್ಮೀಕಿ ನಾಯಕ ಸಂಘದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿದರು.

ತ್ರೇತಾಯುಗ ಕಾಲಘಟ್ಟದ ಮೂಲಸಂವೇದನೆ, ಬದುಕಿನ ಮೌಲ್ಯಗಳು, ಸೋಲು-ಗೆಲುವುಗಳೆಲ್ಲಾ ಒಟ್ಟಾಗಿ ಹಿಡಿದಿಟ್ಟಿರುವ ದಾರ್ಶನಿಕಶಕ್ತಿಯಾಗಿ ವಾಲ್ಮೀಕಿ ರಾಮಾಯಣವು ಸೃಷ್ಟಿಯಾಗಿದ್ದು ಪ್ರತಿಯೊಬ್ಬ ವ್ಯಕ್ತಿಯ ಉತ್ತಮಜೀವನಕ್ಕೆ ಪ್ರೇರಣೆಯಾಗಿದೆ.

ಮಹರ್ಷಿ ವಾಲ್ಮೀಕಿಯ ಬಗೆಗೆ ರಾಮಾಯಣದಲ್ಲಿ ವಿವರಗಳು ಲಭ್ಯವಿಲ್ಲವಾದರೂ ರಾಮಾಯಣ ಕೃತಿಯಲ್ಲಿರುವ ಪಾತ್ರಗಳ ವಿವರಣೆಯ ಮೂಲಕವೇ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ವಾಲ್ಮೀಕಿಯಂತಹ ಮಹಾಕವಿಗಳ ಮೂಲಕ ರಚಿತವಾದ ಸಾಹಿತ್ಯದಿಂದ ಭಾರತೀಯ ಸಂಸ್ಕೃತಿಯ ಅನಾವರಣವಾಗಿರುವುದು. ಕಾವ್ಯರೂಪದಲ್ಲಿ ರಸವತ್ತಾಗಿ ಬರೆದ ಶಾಶ್ವತಕೀರ್ತಿ ವಾಲ್ಮೀಕಿಗೆ ಸಲ್ಲುತ್ತದೆ.

ರಾಮಾಯಣವು ಆದಿಕಾವ್ಯವೂ ಪರಿಪೂರ್ಣ ರಸಕಾವ್ಯವೂ ಆಗಿದೆ. ಇಡೀ ಭಾರತೀಯ ಕವಿಪರಂಪರೆಯು ವಾಲ್ಮೀಕಿಗೆ ಋಣಿಯಾಗಿದೆ. ರಾಮನಾಮದ ಮೂಲಕವೇ ಭಾರತೀಯ ದಾರ್ಶನಿಕತೆಗೆ ಸತ್ಯ ಸುಂದರಗಳ ಆಯಾಮಗಳನ್ನು ಸೃಷ್ಟಿಕೊಟ್ಟವರು ವಾಲ್ಮೀಕಿ ಎಂದರು.

ಸಾಮ್ರಾಜ್ಯಗಳ ಏಳುಬೀಳು ಸಾಧ್ಯತೆ: ರಣಪರಾಕ್ರಮವನ್ನೇ ನಂಬಿ ಬದುಕುತ್ತಿದ್ದ ವಾಲ್ಮೀಕಿ ನಾಯಕಸಮುದಾಯವು ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಪಾಲ್ಗೊಂಡು ಬ್ರಿಟೀಷ್, ಹೈದರ್, ಟಿಪ್ಪು, ಮರಾಠರ ಮಹತ್ವಾಕಾಂಕ್ಷೆಗೆ ತುತ್ತಾಗಿರುವುದು ಇತಿಹಾಸದಿಂದ ತಿಳಿದುಬರುತ್ತದೆ.

ಎಲ್.ಜಿ.ಹಾವನೂರು ಆಯೋಗದ ಮೂಲಕ ಸಿಕ್ಕಿರುವ ಮೀಸಲು ಸೌಲಭ್ಯಗಳು ನಾಯಕಜನಾಂಗದ ಚೇತರಿಕೆಗೆ ಅನುವು ಮಾಡಿಕೊಟ್ಟಂತಾಗಿದೆ.

ವಾಲ್ಮೀಕಿ ರಚಿತ ರಾಮಾಯಣದಲ್ಲಿನ ರಾಮನ ಪಾತ್ರವು ಗುಣವಂತ, ವೀರ, ಧರ್ಮಜ್ಞ, ಸತ್ಯವಂತ, ದೃಢಸಂಕಲ್ಪಿತ, ಸದಾಚಾರ ಸಂಪನ್ನನಾದುದರಿಂದ ಪ್ರತಿ ವ್ಯಕ್ತಿಗೂ ರಾಮನು ಮಾದರಿ. ಮಹಾಕಾವ್ಯದ ರಚನೆಯಿಂದಾಗಿ ವಾಲ್ಮೀಕಿ ಎಂದಿಗೂ ನಮ್ಮ ಮಧ್ಯೆಯೇ ಇರುತ್ತಾರೆ ಎಂದರು.

ಶಿಕ್ಷಕ ಟಿ.ಎಂ.ಮಧು ಮಾತನಾಡಿ, ವಾಲ್ಮೀಕಿ ಅನೇಕ ಕವಿಗಳಿಗೆ ಜನ್ಮದಾತರಿದ್ದಂತೆ. ವಾಲ್ಮೀಕಿ ಒಬ್ಬ ಮಹಾಕವಿ, ಋಷಿಕವಿ, ಮಹರ್ಷಿಯಾಗಿದ್ದಾರೆ. ರಾಮಾಯಣವೇ ಈ ನೆಲದ ಆದಿಕಾವ್ಯವಾಗುತ್ತದೆ.

ವಾಲ್ಮೀಕಿಯ ರಾಮಾಯಣವು ಸಾವಿರಾರು ವರ್ಷಗಳಿಂದಲೂ ಮಸುಕಾಗದೇ ನಮ್ಮ ಜೀವನದ ಭಾಗವಾಗಿದೆ. ರಾಮಾಯಣದ ರಾಮ, ಸೀತೆ ಪಾತ್ರಗಳು ಜನಮಾನಸಕ್ಕೆ ಆದರ್ಶಪಾತ್ರಗಳಾಗಿವೆ. ರಾಮಾಯಣ ಮಹಾಕಾವ್ಯದ ಒಟ್ಟು ಸಂದೇವು ನಮ್ಮ ಜೀವನದ ಸಾರ್ಥಕ್ಯಕ್ಕೆ ಹಾದಿಯನ್ನು ತೋರುತ್ತದೆ ಎಂದರು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಎಸ್.ಎಂ.ನಾರಾಯಣಸ್ವಾಮಿ, ಶಿವಶಂಕರಪ್ಪ, ದೇವರಾಜು, ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ಎನ್.ಪಿ.ನಾಗರಾಜಪ್ಪ, ಬಚ್ಚೇಗೌಡ, ವಾಲ್ಮೀಕಿ ನಾಯಕ ಸಮಾಜದ ತಿರುಮಲೇಶ್, ಶಿವಪ್ಪ, ಎಸ್.ವಿ.ನಾಗರಾಜು, ನಾಗೇಶ್, ಬೆಂಗಳೂರಿನ ನಿವೃತ್ತ ತಾಲ್ಲೂಕು ಕಚೇರಿ ನೌಕರ ಶಂಕರಪ್ಪ, ಶಿಕ್ಷಕ ಎ.ಬಿ.ನಾಗರಾಜ, ಶಿಕ್ಷಕಿ ತಾಜೂನ್, ನಿವೃತ್ತ ಶಿಕ್ಷಕ ಬಿ.ನಾಗರಾಜು, ಜಯಂತಿ, ಮಂಜುಳಮ್ಮ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version