
Sugaturu, Sidlaghatta : ನೇಯ್ಗೆ ಜನಾಂಗದ (ತೊಗಟವೀರ ಕ್ಷತ್ರಿಯ) ಆರಾಧ್ಯ ದೈವ ಹಾಗೂ ಕುಲದೇವಿ ಸರ್ವಶಕ್ತಿ ಶ್ರೀ ಚೌಡೇಶ್ವರಿ ದೇವಿಯ ದೇವಾಲಯ ನೂತನ ಶಿಲಾಬಿಂಬ ಪ್ರತಿಷ್ಠಾಪನೆ, ವಿಮಾನ ಗೋಪುರ ಮತ್ತು ನವಗ್ರಹ ದೇವಸ್ಥಾನದ ಮಹಾಕುಂಭಾಭಿಷೇಕ ಮಹೋತ್ಸವವು ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ವೈಭವದಿಂದ ಜೂನ್ 22 ರಿಂದ ಜೂನ್ 24ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತೊಗಟವೀರ ಕ್ಷತ್ರಿಯ ಜನಾಂಗದ ಹಿರಿಯರಾದ ಎಸ್.ಎಲ್.ಎನ್ ಟ್ರಸ್ಟ್ನ ಅಧ್ಯಕ್ಷ ದೇವನಹಳ್ಳಿಯ ಅಶ್ವತ್ಥನಾರಾಯಣ್ ಅವರ ಮುಂದಾಳತ್ವದಲ್ಲಿ ಆಕರ್ಷಕ ದೇವಾಲಯ ನಿರ್ಮಣ, ವಿವಿಧ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿವೆ.
ಜೂನ್ 22 ರಂದು ಗಂಗಾಪೂಜೆ, ಗ್ರಾಮ ಪ್ರದಕ್ಷಿಣೆ, ಗಣಪತಿ ಪೂಜೆ, ವಾಸ್ತು ಶಾಂತಿ, ಅಂಕುರಾರ್ಪಣೆ ಮತ್ತು ಯಾಗಶಾಲಾ ಪೂಜೆಗಳು ನೆರವೇರಲಿವೆ. ಜೂನ್ 23 ರಂದು ಹೋಮ-ಹವನಗಳು ನಡೆಯಲಿದ್ದು, ಬೆಳಿಗ್ಗೆ 10:30ಕ್ಕೆ ನೂತನ ಶಿಲಾಬಿಂಬಕ್ಕೆ ಭಕ್ತಾದಿಗಳಿಂದಲೇ ಜಲಾಧಿವಾಸ, ಕ್ಷೀರಾಧಿವಾಸ ಸೇವೆಗಳು, ಸಂಜೆ 108 ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆ ನಡೆಯಲಿದೆ.
ಜೂನ್ 24 ರಂದು ದೇವಿಯ ನೂತನ ಶಿಲಾಬಿಂಬಕ್ಕೆ ಜೀವನ್ಯಾಸ ಮೂಡಿಸಿ, ವಿಮಾನ ಗೋಪುರ ಹಾಗೂ ಮೂಲದೇವತೆ ಶ್ರೀ ಚೌಡೇಶ್ವರಿ ದೇವಿಗೆ ಮಹಾಕುಂಭಾಭಿಷೇಕ ಮತ್ತು ವಿಶೇಷ ಪಂಚಾಮೃತ ಅಭಿಷೇಕಗಳು ನೆರವೇರಲಿವೆ.
ತೊಗಟವೀರ ಕ್ಷತ್ರಿಯ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ಪೂಜ್ಯ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಶ್ರೀಗಂದದ ಸಸಿಗಳ ವಿತರಣೆ ಮಾಡಿದ ಶಾಲೆ:
ಈ ಶುಭ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ಸುಗಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮುಂದಾಗಿದೆ. ಶ್ರೀ ಚೌಡೇಶ್ವರಿ ದೇವಿಯ ಆಲಯದ ಲೋಕಾರ್ಪಣೆಯ ದಿವ್ಯ ಸ್ಮರಣೆಗಾಗಿ ದೇವಸ್ಥಾನದ ಆಹ್ವಾನ ಪತ್ರಿಕೆಯೊಂದಿಗೆ ಸಸಿಗಳನ್ನು ವಿತರಿಸುವ ಮಾದರಿ ಯೋಜನೆ ಕಾರ್ಯಗತಗೊಂಡಿದೆ. ಈ ಮೂಲಕ ಧರ್ಮ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರಲಾಗುತ್ತಿದೆ.
ಈ ಬಾರಿಯ ಹಸಿರು ಅಭಿಯಾನಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಜಲಮಂಡಳಿಯ ಸಹಾಯಕ ಎಂಜಿನಿಯರ್ ದಿನೇಶ್ ಅವರು ಕೈಜೋಡಿಸಿದ್ದು, ಶಾಲೆಯ “ಸುಂದರಲಾಲ್ ಬಹುಗುಣ ಇಕೋ ಕ್ಲಬ್” ವತಿಯಿಂದ ಒಟ್ಟು 500 ಶ್ರೀಗಂಧದ ಸಸಿಗಳನ್ನು ವಿತರಿಸಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಒಂದೊಂದು ಮರವನ್ನು ನೆಟ್ಟು, ಪೋಷಿಸಿ ಬೆಳೆಸಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಇಕೋ ಕ್ಲಬ್ನ ಕಾರ್ಯದರ್ಶಿ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಮಾತನಾಡಿ, ಶ್ರೀಗಂಧವು ಕೇವಲ ಆರ್ಥಿಕವಾಗಿ ಲಾಭದಾಯಕವಷ್ಟೇ ಅಲ್ಲ, ನಮ್ಮ ಸಂಸ್ಕೃತಿಯ ಮತ್ತು ಮಣ್ಣಿನ ಸುಗಂಧವಾಗಿದೆ. ಇದನ್ನು ಬೆಳೆಸಲು ಹೆಚ್ಚಿನ ಆರೈಕೆ ಬೇಕಾಗಿಲ್ಲ, ಆರಂಭದ ಕೆಲವು ತಿಂಗಳುಗಳು ಸಮರ್ಪಕವಾಗಿ ನೀರು ಉಣಿಸಿ, ಜಾನುವಾರುಗಳಿಂದ ರಕ್ಷಿಸಿದರೆ ಸಾಕು, ಅತ್ಯಂತ ಸರಳವಾಗಿ ಬೆಳೆಯುತ್ತದೆ ಎಂದು ವಿವರಿಸಿದರು.