Home News 47 ವರ್ಷಗಳ ನಂತರ ಉಡುಪಿ ಪೇಜಾವರ ಮಠದ ಶ್ರೀಗಳ ಆಗಮನ

47 ವರ್ಷಗಳ ನಂತರ ಉಡುಪಿ ಪೇಜಾವರ ಮಠದ ಶ್ರೀಗಳ ಆಗಮನ

0
Sidlaghatta Udupi Pejavara Math Shri visit

Sidlaghatta : ಶಿಡ್ಲಘಟ್ಟಕ್ಕೆ 47 ವರ್ಷಗಳ ನಂತರ ಉಡುಪಿ ಪೇಜಾವರ ಮಠದ ಶ್ರೀಗಳ ಆಗಮನವಾಗುತ್ತಿದೆ. 1979 ರ ಜೂನ್ 22 ರಂದು ಅಂದಿನ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಗಮಿಸಿ, ಮುತ್ತೂರು ಬೀದಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಜೂನ್ 19ರ ಶುಕ್ರವಾರ ಅದೇ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಈಗಿನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಆಗಮಿಸಲಿದ್ದಾರೆ.

ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಪೇಜಾವರ ಮಠದ 29ನೇ ಪೀಠಾಧಿಪತಿಗಳಾಗಿದ್ದರು. ಅವರು ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿದರು. ಸಮಾನತೆ, ಗೋಸಂರಕ್ಷಣೆ, ಧರ್ಮಪ್ರಚಾರ ಮತ್ತು ಸಮಾಜಸೇವೆಗೆ ವಿಶೇಷ ಒತ್ತು ನೀಡಿದ್ದರು. ಅವರು 2019ರ ಡಿಸೆಂಬರ್ 29ರಂದು ಬೃಂದಾವನಸ್ಥರಾದರು.

ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಪೇಜಾವರ ಮಠದ 30ನೇ ಪೀಠಾಧಿಪತಿಗಳಾಗಿದ್ದು, ತಮ್ಮ ಗುರುಗಳಾದ ಶ್ರೀ ವಿಶ್ವೇಶ ತೀರ್ಥರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಧರ್ಮಪ್ರಚಾರ, ಶಿಕ್ಷಣ, ಯುವಜನರಿಗೆ ಸಂಸ್ಕಾರ ಬೋಧನೆ ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.

ಜೂನ್ 19ರ ಶುಕ್ರವಾರ ನಗರದ ಮುತ್ತೂರು ಬೀದಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಆಗಮಿಸಿ, ಸಂಸ್ಥಾನ ಪೂಜೆಯನ್ನು ನೆರವೇರಿಸಿ ಭಕ್ತವೃಂದವನ್ನು ಆಶೀರ್ವದಿಸಲಿದ್ದಾರೆ. ಪ್ರತಿಯೊಂದು ದೇವಾಲಯದ ಮುಖಂಡರು, ವಿವಿಧ ಜಾತಿ, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಿದ್ದೇವೆ. ಬೆಳೆಗ್ಗೆ 8 ಗಂಟೆಗೆ ಮಯೂರ ವೃತ್ತದಿಂದ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀಗಳನ್ನು ವೇದಘೋಷ, ಭಜನೆ, ಸ್ತೋತ್ರಗಳ ಮೂಲಕ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕರೆತರಲಿದ್ದು, ಧರ್ಮಾತೀತರಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡುತ್ತಿರುವುದಾಗಿ ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಸದಸ್ಯರು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version