Sidlaghatta : ತೆರಿಗೆ ಸಂಗ್ರಹಿಸಲು ಬಳಸುವ ಉಪಕರಣವನ್ನು ಕರವಸೂಲಿಗಾರರಿಗೆ ಕೊಟ್ಟು ಅದನ್ನು ಬಳಸಲು ತರಬೇತಿ ಸಹ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರವಸೂಲಿಗಾರರಿಗೆ ತೆರಿಗೆ ಸಂಗ್ರಹಿಸಲೆಂದು ಉಪಕರಣವನ್ನು ವಿತರಿಸಿ ಅವರು ಮಾತನಾಡಿದರು.
ಹಿಂದೆ ಆಸ್ತಿ ತೆರಿಗೆಯನ್ನು ನೀಡುವವರಿಗೆ ಸಕಾಲದಲ್ಲಿ ರಸೀತಿ ಸಿಗದೆ ತೊಂದರೆ ಹಾಗೂ ಅನುಮಾನಗಳಿಗೆ ಕಾರಣವಾಗುತ್ತಿತ್ತು. ಈ ನ್ಯೂನತೆಯನ್ನು ಸರಿಪಡಿಸಲು ಮೊಬೈಲ್ ಆಪ್ ಬಳಸಿ ತೆರಿಗೆ ಕಟ್ಟುವುದನ್ನು ಸರ್ಕಾರ ಜಾರಿಗೆ ತಂದಿತು. ಆಗ ಕೂಡ ಇಂಟರ್ ನೆಟ್ ಸೌಲಭ್ಯವಿರದೆ, ಪ್ರಿಂಟರ್ ಇರದೆ, ರಸೀದಿ ಕೊಡಲು ಆಗುತ್ತಿರಲಿಲ್ಲ. ಇದನ್ನು ಕೂಡ ಉನ್ನತೀಕರಿಸಿ, ವಿದ್ಯುತ್ ಬಿಲ್ ಕೊಡುವ ಯಂತ್ರದ ರೀತಿಯಲ್ಲಿ ಕಾಣುವಂತೆ ಕರವಸೂಲಿಗೆ ಯಂತ್ರವನ್ನು ಸರ್ಕಾರ ನೀಡಿದೆ. ಗ್ರಾಮದ ಯಾವುದೇ ಮನೆಯ ಬಳಿ ಹೋಗಿ ವಿದ್ಯುತ್ ಬಿಲ್ ಕೊಡುವಂತೆಯೇ ಆಸ್ತಿ ತೆರಿಗೆ ಸಂಗ್ರಹಿಸಿ ಅಲ್ಲಿಯೇ ರಸೀದಿ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ಮಾತನಾಡಿ, ಮಂಗಳವಾರದಿಂದ ಈ ಯಂತ್ರ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಕರವಸೂಲಿಗಾರರಿಗೆ ಮಂಗಳವಾರ ಇನ್ನೊಂದು ಸುತ್ತಿನ ತರಬೇತಿಯನ್ನು ನೀಡಿ, ಅವರ ಅನುಮಾನಗಳನ್ನು ಪರಿಹರಿಸಲಾಗುತ್ತದೆ. ತಾಲ್ಲೂಕಿನಲ್ಲಿರುವ ಎಲ್ಲ ತೆರಿಗೆದಾರರು ಈ ಸೌಲಭ್ಯವನ್ನು ಬಳಸಿಕೊಳ್ಳಿ. ನಿಮ್ಮ ಮನೆ ಬಾಗಿಲಿಗೆ ಕರವಸೂಲಿಗಾರರು ಬಂದಾಗ ಆಸ್ತಿ ತೆರಿಗೆ ಪಾವತಿಸಿ, ಅಲ್ಲಿಯೇ ರಸೀದಿ ಪಡೆದುಕೊಳ್ಳಿ, ನೀವು ಹಣ ಪಾವತಿಸುವುದರಿಂದ ಗ್ರಾಮ ಪಂಚಾಯಿತಿಯ ಮೂಲಕ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರಕುತ್ತದೆ ಎಂದು ಹೇಳಿದರು.