ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಸ್ವಚ್ಛಭಾರತ ಮಿಷನ್ ಅಭಿಯಾನ ಯೋಜನೆಯಡಿ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಗಳನ್ನು ವೀಕ್ಷಿಸಿ ಜಿಲ್ಲಾ ಪಂಚಾಯಿತಿ ಸಿಇಓ ಪಿ.ಶಿವಶಂಕರ್ ಮಾತನಾಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಿಲ್ಲೆಯಾದ್ಯಂತ ನಿರ್ಮಿಸಿರುವ ಕೆರೆ-ಕುಂಟೆ,ಕಲ್ಯಾಣಿಗಳು ಮತ್ತು ಚೆಕ್ಡ್ಯಾಮ್ಗಳಿಗೆ ಮಳೆಯ ನೀರು ಹರಿದು ಅಂರ್ತಜಲಮಟ್ಟ ವೃದ್ಧಿಯಾಗಿ ಸುಮಾರು 191 ಸಾವಿರ ಕೋಟಿ ಲೀಟರ್ ನೀರು ಶೇಖರಣೆಯಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ 7 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸಕಡ್ಡಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಳಮಾಚನಹಳ್ಳಿ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಕಸವನ್ನು ಸಂಗ್ರಹ ಮಾಡಲು ಈಗಾಗಲೇ 7 ವಾಹನಗಳನ್ನು ಸಹ ಖರೀದಿ ಮಾಡಲಾಗಿದೆಯೆಂದು ಅವರು ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 55 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲು ಗುರಿ ನೀಡಲಾಗಿತ್ತು. ಈಗಾಗಲೇ 47 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ, ಮಣ್ಣು, ನೀರು, ಜಲಮೂಲಗಳ ಹಾಗೂ ಪ್ರಾಕೃತಿಕ ಸಂಪತ್ತುಗಳ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ನಡೆಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದ ಬಹುತೇಕ ಕೆರೆಕುಂಟೆಗಳು ಭರ್ತಿಯಾಗಿ ನರೇಗಾ ಯೋಜನೆ ಈ ಭಾಗದ ಜನರಿಗೆ ವರದಾನವಾಗಿದೆ ಎಂದರು.
ಪೋಷಕ ಕಾಲುವೆಗಳ ಅಭಿವೃದ್ಧಿ: ನರೇಗಾ ಯೋಜನೆಯಡಿ ಈಗಾಗಲೇ ಕೆರೆ-ಕುಂಟೆ,ಕಲ್ಯಾಣಿಗಳು ಮತ್ತು ಬಹುಕಮಾನ್ ಚೆಕ್ಡ್ಯಾಂಗಳನ್ನು ನಿರ್ಮಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಅದರ ಜೊತೆಗೆ ಕೆರೆಗಳಿಗೆ ನೀರು ಹರಿಯುವ ಪೋಷಕ ಕಾಲುವೆಗಳನ್ನು ಅಭಿವೃದ್ಧಿಗೊಳಿಸಿ, ಮಳೆನೀರು ಸರಾಗವಾಗಿ ಹರಿಯಲು ಅನುಕೂಲ ಕಲ್ಪಿಸಿದ್ದೇವೆ. ಸರ್ಕಾರಿ ಶಾಲೆಗಳು ಮತ್ತು ಕಚೇರಿಗಳಲ್ಲಿ ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡು ಮಳೆನೀರು ಶೇಖರಣೆ ಮಾಡಿದ್ದೇವೆ ಎಂದರು.
ಕುಡಿಯುವ ನೀರಿನ ಅಭಾವ ಇರುವುದಿಲ್ಲ: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಬಹುತೇಕ ಎಲ್ಲಾ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಮುಂದಿನ ಎರಡು ವರ್ಷಗಳ ಕಾಲ ಕುಡಿಯುವ ನೀರಿನ ಅಭಾವ ಎದುರಾಗುವುದಿಲ್ಲ. ಜೊತೆಗೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ನರೇಗಾ ಯೋಜನೆಯ ಮೂಲಕ ಗ್ರಾಮೀಣಾಭಿವೃದ್ಧಿಯ ಜೊತೆಗೆ ಪರಿಸರವನ್ನು ಸಂರಕ್ಷಣೆ ಮಾಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎನ್.ಆರ್.ಎಲ್.ಎಂ ಯೋಜನೆಯಡಿ ನಿರ್ಮಿಸಿರುವ ಸಂಜೀವಿನಿ ಭವನವನ್ನು ಜಿಲ್ಲಾ ಪಂಚಾಯಿತಿ ಸಿಇಓ ಪಿ.ಶಿವಶಂಕರ್ ಅವರು ವೀಕ್ಷಿಸಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಬೈರೇಗೌಡ, ಮಾಜಿ ಸದಸ್ಯ ಪಾಪಣ್ಣ, ನರೇಗಾ ಜೆಇ ವಿವೇಕ್, ಬಿಲ್ ಕಲೆಕ್ಟರ್ ಸುರೇಶ್, ಅಷ್ಟಲಕ್ಷ್ಮೀ ಮಹಿಳಾ ಒಕ್ಕೂಟದ ಸಿಬ್ಬಂದಿ ನೀಲಮ್ಮ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರತ್ನಮ್ಮ,ಅಶ್ವಿನಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi