ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪದಾಧಿಕಾರಿಗಳಿಂದ ಮನವಿ

0
135

ನೆರೆಯ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಅರಿಕೆರೆ ಗ್ರಾಮದ ಸರ್ವೇ ನಂ 10 ರ ಪೈಕಿ ಸುಮಾರು 170 ಎಕರೆ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿರುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿಡ್ಲಘಟ್ಟ ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪದಾಧಿಕಾರಿಗಳು ತಹಶೀಲ್ದಾರ್‌ರ ಮೂಲಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

 ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ಕೆ.ಅರುಂಧತಿ ವರಿಗೆ ಮನವಿ ಪತ್ರ ಸಲ್ಲಿಸಿದ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಕರ್ನಾಟಕದ ಪ್ರಾಂತೀಯ ಪ್ರಮುಖ್ ಬಸವರಾಜ್ ಮಾತನಾಡಿ, ನೆರೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಅರಿಕೆರೆ ಗ್ರಾಮದ ಸರ್ವೆ ನಂಬರ್ 10 ರಲ್ಲಿ 173.39 ಎಕರೆ ಗೋಮಾಳ ಜಮೀನಿದ್ದು ಈ ಪೈಕಿ 1 ಎಕರೆ 20 ಗುಂಟೆ ಯಷ್ಟು ಜಮೀನನ್ನು ದಿನ್ನೇಹೊಸಳ್ಳಿ ಹಾಗೂ ಹನುಮಂತಪುರ ಗ್ರಾಮಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಆಶ್ರಯ.ಸಿ.ಆರ್/71/2017-18 ರಂತೆ ಕಾಯ್ದಿರಿಸಿದ್ದು ಉಳಿದ ಸುಮಾರು 170 ಎಕರೆ ಗೋಮಾಳ ಜಮೀನನ್ನು ಕ್ರೈಸ್ತ ಮತಸ್ಥರು ಆಕ್ರಮಿಸಿಕೊಂಡು ಶಿಲುಬೆ ಹಾಕಿರುವುದು ಹಾಗೂ ಸಮಾಜದ ಸ್ವಾಸ್ಥ್ಯ ಕೆಡವಿ ಕೋಮು ಗಲಭೆಗೆ ಪ್ರಚೋದನೆ ಕೊಡುತ್ತಿರುವುದು ಖಂಡನೀಯ ಎಂದರು.

 ಕೂಡಲೇ ಕಾನೂನು ಬಾಹೀರವಾಗಿ ನೆಟ್ಟಿರುವ ಶಿಲುಬೆಗಳನ್ನು ತೆರವುಗೊಳಿಸುವ ಜೊತೆಗೆ ಗೋಮಾಳ ಜಾಗವನ್ನು ಗೋವುಗಳ ರಕ್ಷಣೆ ಹಾಗೂ ಪಾಲನೆಗಾಗಿ ಮೀಸಲಿಡಬೇಕು. ಸ್ಥಳ ವೀಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹೋದಾಗ ಅಲ್ಲಿನ ಕೆಲ ಕ್ರೈಸ್ತ ದುಷ್ಕರ್ಮಿಗಳು ಹಲ್ಲೆ ನಡೆಸಲು ಮುಂದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 ಈ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೋಮಾಳ ರಕ್ಷಿಸುವುದು ಸೇರಿದಂತೆ ಬೆದರಿಕೆ ಹಾಕಿರುವ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಪತ್ರವನ್ನು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಸಲ್ಲಿಸಿದರು.

 ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಆರ್.ನಾಗರಾಜ್,  ತಾಲ್ಲೂಕು ಕಾರ್ಯದರ್ಶಿ ಆರ್.ಪ್ರಕಾಶ್, ಪದಾಧಿಕಾರಿಗಳಾದ ಚೀಮನಹಳ್ಳಿ ಪ್ರತಾಪ್, ಶೆಟ್ಟಹಳ್ಳಿ ಭಾನುಪ್ರತಾಪ್, ವಿನಯ್, ಅಶ್ವತ್, ಪುರುಷೋತ್ತಮ್, ದೇವರಾಜು ಹಾಜರಿದ್ದರು.