
Sidlaghatta : ಹಣವನ್ನು ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮರ್ಥವಾಗಿ ನಿರ್ವಹಿಸುವುದು ಅಷ್ಟೇ ಅಗತ್ಯ. ಉಳಿತಾಯ, ಹೂಡಿಕೆ ಮತ್ತು ಸಾಲದ ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬರೂ ಜ್ಞಾನ ಹೊಂದಿರಬೇಕು,” ಎಂದು ಶ್ರೀ ಸರಸ್ವತಿ ಕಾನ್ವೆಂಟ್ ಅಧ್ಯಕ್ಷ ಎನ್. ಶ್ರೀಕಾಂತ್ ತಿಳಿಸಿದರು.
ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಲೇಖಕ ಡಿ.ಎಸ್. ಶ್ರೀನಿಧಿ ಅವರು ರಚಿಸಿರುವ “ದಿ ವೆಲ್ತ್ ಬ್ಲೂಪ್ರಿಂಟ್ : ಹೌ ಇಂಡಿಯನ್ಸ್ ಬಿಲ್ಡ್ ಫೈನಾನ್ಷಿಯಲ್ ಫ್ರೀಡಂ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜನರಿಗೆ ಆರ್ಥಿಕ ಸಾಕ್ಷರತೆ ಮತ್ತು ಉದ್ಯಮಶೀಲತೆಯ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಬೇಕಾದ ವಿವೇಚನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಲೇಖಕರು ಈ ಪುಸ್ತಕದ ಮೂಲಕ ಉತ್ತಮ ಕೌಶಲ್ಯಗಳನ್ನು ಒದಗಿಸಿದ್ದಾರೆ ಎಂದು ಶ್ಲಾಘಿಸಿದರು.
ಲೇಖಕ ಡಿ.ಎಸ್. ಶ್ರೀನಿಧಿ ಮಾತನಾಡಿ, “ಹಣಕಾಸಿನ ವಿಷಯಗಳು ಕ್ಲಿಷ್ಟವಾಗಿರದೆ ಸಾಮಾನ್ಯ ಜನರಿಗೂ, ವಿಶೇಷವಾಗಿ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶದಿಂದ ಈ ಪುಸ್ತಕ ಬರೆಯಲಾಗಿದೆ. ಇದು ಮಕ್ಕಳು, ಮಹಿಳೆಯರು, ಯುವಕರು ಮತ್ತು ಹಿರಿಯರು ಹೀಗೆ ಎಲ್ಲ ವರ್ಗದವರಿಗೂ ಉಪಯುಕ್ತವಾಗಿದೆ,” ಎಂದರು.
ತಾಲ್ಲೂಕು ಬ್ರಾಹ್ಮಣರ ಮಹಾಸಭಾ ಅಧ್ಯಕ್ಷ ಎ.ಎಸ್. ರವಿ ಮಾತನಾಡಿ, ಸಮಾಜದಲ್ಲಿ ಹಣಕಾಸಿನ ಶಿಸ್ತು ಬೆಳೆಸಲು ಈ ಕೃತಿ ಸಹಕಾರಿ ಎಂದು ತಿಳಿಸಿದರು. ರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ಎಸ್.ವಿ. ನಾಗರಾಜರಾವ್, ವೈ.ಎನ್. ದಾಶರಥಿ ಹಾಗೂ ಹಲವು ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.