ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ರಚನೆ ಮಾಡಲು ತಾಲ್ಲೂಕು ಆಡಳಿತ ಸೂಚನೆ ನೀಡಿದೆ. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪಾಲಿಸುವಂತೆ ಮಾಡಲು ಈ ಪಡೆ ಕಾರ್ಯಪ್ರವೃತ್ತರಾಗಬೇಕಿದೆ.
ಗ್ರಾಮ ಮಟ್ಟದ ಕಾರ್ಯಪಡೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್, ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆ, ನೋಂದಾಯಿತ ಸ್ಥಳೀಯ ವೈದ್ಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುತ್ತಾರೆ.
ಗ್ರಾಮಗಳಲ್ಲಿ 5 ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅತ್ಯಾವಶ್ಯಕ ವಸ್ತುಗಳ ಖರೀದಿ ಸಮಯದಲ್ಲಿ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಕೊರೊನಾ ಬಗ್ಗೆ ಸುಳ್ಳು ವದಂತಿಗಳನ್ನು ಹರಡದಂತೆ ನೋಡಿಕೊಳ್ಳಬೇಕು. ಮದುವೆ, ಜಾತ್ರೆ, ಸಂತೆ ಮುಂತಾದ ಗುಂಪು ಚಟುವಟಿಕೆಗಳನ್ನು ಈ ಪಡೆ ತಡೆಯಬೇಕಿದೆ.
ಇದರೊಂದಿಗೆ ಗ್ರಾಮದ ಹಿರಿಯರ ಆರೋಗ್ಯವನ್ನು ಗಮನಿಸುತ್ತಿರಬೇಕು. ಯಾರಿಗೇ ಆಗಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಚರಂಡಿಗಳ ಸ್ವಚ್ಛತೆ, ಕಸ ವಿಲೇವಾರಿ, ಹೊರಗಿನಿಂದ ಬರುವವರ ವಿವರ, ಮಾಹಿತಿ, ಶುಚಿತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಶೂದ್ಧ ನೀರಿನ ವ್ಯವಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಬೂನಿನಿಂದ ಕೈ ತೊಳೆಯುವ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿಯಿಂದ 14 ನೇ ಹಣಕಾಸಿನ ಅನುದಾನದಲ್ಲಿ ಸ್ಯಾನಿಟೈಸರ್, ಮಾಸ್ಕ್, ಸಾಬೂನು ಮುಂತಾದ ಸ್ವಚ್ಛತಾ ಪರಿಕರಗಳನ್ನು ಖರೀದಿಸಬೇಕು.
“ಯಾವತ್ತು ಪಾಸಿಟೀವ್ ಕೇಸ್ ನಮ್ಮ ಭಾರತದಲ್ಲಿ ವರದಿಯಾಗುವುದಿಲ್ಲವೋ ಆ ಕ್ಷಣದಿಂದ ಎರಡು ತಿಂಗಳುಗಳ ಕಾಲ ಭಾರಿ ಹುಷಾರಾಗಿರಬೇಕು. ಏಕೆಂದರೆ, ಹದಿನಾಲ್ಕು ದಿನಗಳು ರೋಗಿಯನ್ನು, ಉಳಿದ ಹದಿನಾಲ್ಕು ದಿನ ಅವರ ಕುಟುಂಬದ ಸದಸ್ಯರನ್ನು ನೋಡಿಕೊಳ್ಳಬೇಕು. ಈ ಒಂದು ತಿಂಗಳ ನಂತರ ಇನ್ನೊಂದು ತಿಂಗಳ ಅವಧಿಯಲ್ಲಿ ಯಾವುದೂ ಹೊಸ ಕೇಸ್ ಬರಲಿಲ್ಲವೆಂದರೆ ಆಗ ನಾವು ನಿರಾಳವಾಗಿ ನಿಟ್ಟುಸಿರು ಬಿಡಬಹುದು. ಇಡೀ ವಿಶ್ವ ಭಾರತದೆಡೆಗೆ ನೋಡುತ್ತಿದೆ, ಏಕೆಂದರೆ 138 ಕೋಟಿ ಜನಸಂಖ್ಯೆಯಿರುವುದರಿಂದ ಹೇಗೆಲ್ಲಾ ಕ್ರಮ ಕೈಗೊಳ್ಳುತ್ತಿದ್ದಾರೆ ಅಂತ. ಅದನ್ನು ನಾವು ಸವಾಲಾಗಿ ಸ್ವಿಕರಿಸಿ ಕೆಲಸ ಮಾಡುತ್ತಿದ್ದೇವೆ. ತಾಲ್ಲೂಕಿನ ಯಾವುದೇ ಭಾಗಕ್ಕೂ ಯಾರೇ ಹೊಸಬರು ಎಲ್ಲಿಂದಲೇ ಬರಲಿ ತಕ್ಷಣವೇ ನಮಗೆ ಮಾಹಿತಿಯನ್ನು ನೀಡಲಿ. ಆತಂಕಕ್ಕೊಳಗಾಗುವುದು ಬೇಡ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
- Advertisement -
- Advertisement -
- Advertisement -







