ಡಿಜಿಟಲ್ ಸಾಕ್ಷರತೆಯು ಈಗಿನ ಕಾಲದ ಅವಶ್ಯಕತೆಯಾಗಿದೆ. ಸಮಾಜವನ್ನು ಡಿಜಿಟಲ್ ಆಗಿ ಸದೃಢಗೊಳಿಸುವ, ಆರ್ಥಿಕ ಜ್ಞಾನ ಬೆಳೆಸುವ, ಇ ಆಡಳಿತದ ವಿವಿಧ ಯೋಜನೆಗಳನ್ನು ಜನರಿಗೆ ಅರ್ಥೈಸುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಆಕ್ಷನ್ ಆನ್ ಡಿಸೆಬಿಲಿಟಿ ಅಂಡ್ ಡೆವಲೆಪ್ ಮೆಂಟ್ ಇಂಡಿಯಾ ಮತ್ತು ನಾಸ್ಕಾಂ ಫೌಂಡೇಷನ್ ಆಯೋಜಿಸಿದ್ದ ಡಿಜಿಟಲ್ ಸಾಕ್ಷರತಾ ತರಬೇತಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದ ವಾಸಿಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಪ್ರಜೆಯೂ ಡಿಜಿಟಲ್ ಸೇವೆ ಮತ್ತು ತಂತ್ರಜ್ಞಾನವನ್ನು ಬಳಸಲು ಸಮರ್ಥರಾದಾಗ ಮಾತ್ರ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ ಯಶಸ್ವಿಯಾದಂತೆ. ಡಿಜಿಟಲ್ ಸಾಕ್ಷರತೆಯು ಜೀವನ ಪರಿಸ್ಥಿತಿಗಳಲ್ಲಿ ಅರ್ಥಪೂರ್ಣ ಕ್ರಮಗಳಿಗಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ವ್ಯಕ್ತಿಗಳು ಮತ್ತು ಸಮುದಾಯಗಳ ಸಾಮರ್ಥ್ಯವಾಗಿದೆ. ಡಿಜಿಟಲ್ ಸಾಕ್ಷರರಾದ ವ್ಯಕ್ತಿಗಳು ಕಂಪ್ಯೂಟರ್ ಗಳು ಸ್ಮಾರ್ಟ್ ಫೋನ್ ಮೊದಲಾದ ಸಾಧನಗಳನ್ನು, ಇಮೇಲ್ ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ಇಂಟರ್ನೆಟ್ ಬ್ರೌಸ್, ಸರ್ಕಾರಿ ಸೇವೆಗಳನ್ನು ಪ್ರವೇಶಿಸುವುದು, ಮಾಹಿತಿಗಾಗಿ ಹುಡುಕಿ, ನಗದನ್ನು ಬಳಸದೇ ವಹಿವಾಟುಗಳನ್ನು ಕೈಗೊಳ್ಳುವುದು ಇತ್ಯಾದಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಅಂಗವಿಕಲರಿಗೂ ಡಿಜಿಟಲ್ ಸಾಕ್ಷರತೆಯು ವರದಾನವಾಗಲಿದೆ. ಸರ್ಕಾರದ ಸೇವಗಳನ್ನು ಯಾರ ನೆರವೂ ಪಡೆಯದೇ ತಿಳಿದುಕೊಳ್ಳುವ, ಪಡೆದುಕೊಳ್ಳುವ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ತಮ್ಮ ಆರ್ಥಿಕ ವ್ಯವಹಾರಗಳು, ಶೈಕ್ಷಣಿಕ ಮತ್ತು ವೃತ್ತಿಪರ ಅವಶ್ಯಕತೆಗಳು ಮತ್ತು ವ್ಯಾಪಾರ ವಹಿವಾಟು ಮೊದಲಾದ ಕೆಲಸಗಳನ್ನು ಅಂತರ್ಜಾಲದ ಮೂಲಕ ಮೊಬೈಲ್ ಮತ್ತು ಗಣಕ ಯಂತ್ರದ ಸಹಾಯದಿಂದ ಮಾಡಿಕೊಳ್ಳಬಹುದಾಗಿದೆ. ಈ ತರಬೇತಿಯಿಂದ ಉದ್ಯೋಗದ ಅವಕಾಶಗಳೂ ಇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾಕಿರಣ ಅಂಧ ಮಕ್ಕಳು ಹಾಡುಗಳನ್ನು ಹಾಡಿದರು. ಆಕ್ಷನ್ ಆನ್ ಡಿಸೆಬಿಲಿಟಿ ಅಂಡ್ ಡೆವಲೆಪ್ ಮೆಂಟ್ ಇಂಡಿಯಾ ಸಂಸ್ಥೆಯವರು ನಾಟಕದ ಮೂಲಕ ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿದರು.
ಇನ್ಫೋಸಿಸ್ ಬಿ.ಪಿ.ಎಂ ನ ಕೆ.ರಾಘವೇಂದ್ರ, ರೀನ ರವಿ, ಶಾಲಿನಿ ಜಯಕೃಷ್ಣನ್, ಬಿ.ಆರ್.ಸಿ ಯ ಎನ್.ತ್ಯಾಗರಾಜು, ನಾಸ್ಕಾಂ ಫೌಂಡೇಶನ್ ನ ಅನ್ವಿಶಾ ಭಾರದ್ವಾಜ್, ಎಡೀಡಿಯ ರಾಮಚಂದ್ರ, ವಿದ್ಯಾಶ್ರೀ, ರಕ್ಷಿತಾ, ಬಿ.ಜಿ.ನಾಗರಾಜು, ಮುರಳಿ ಹಾಜರಿದ್ದರು.
- Advertisement -
- Advertisement -
- Advertisement -