ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಬಿಂಬಿಸುವ ಚಿತ್ರ ಪ್ರದರ್ಶನ

- Advertisement -
- Advertisement -

ಶಿಕ್ಷಕರು ನಿರ್ಮಿಸಿದ ಚಲನಚಿತ್ರವೊಂದನ್ನು ಶಿಕ್ಷಕರೊಬ್ಬರು ನಿರ್ದೇಶಿಸಿದ್ದು, ಅದನ್ನು ಕೆಲವು ಸಮಾನಮನಸ್ಕ ಶಿಕ್ಷಕರು ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ತೋರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಕನ್ನಡ ಶಿಕ್ಷಕರು. ಪ್ರವೃತ್ತಿಯಲ್ಲಿ ಕವಿ, ನಾಟಕಕಾರರಾದ ಎಲ್.ಎನ್.ಮುಕುಂದರಾಜ್. ಮಾತೃಭಾಷೆಗೆ ಸಂಬಂಧಿಸಿದಂತೆ ನಿರ್ದೇಶಿಸಿರುವ ‘ಕಾಡ ಹಾದಿಯ ಹೂಗಳು’ ಎಂಬ ಮಕ್ಕಳ ಚಿತ್ರವನ್ನು ತಾಲ್ಲೂಕಿನ ಹಾರಡಿಯ ಸರ್ಕಾರಿ ಶಾಲಾ ಶಿಕ್ಷಕರಾದ ಬಸವರಾಜ್ ಮತ್ತು ಸಮಾನ ಮನಸ್ಕ ಶಿಕ್ಷಕರ ತಂಡ ಮಕ್ಕಳಿಗೆ ತೋರಿಸುವ ಪ್ರಯತ್ನದಲ್ಲಿದ್ದಾರೆ. ತಾಲ್ಲೂಕಿನ ಎಚ್.ಕ್ರಾಸ್ನಲ್ಲಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನವೆಂಬರ್ 15 ರ ಭಾನುವಾರ ಮತ್ತು ನವೆಂಬರ್ 16 ರ ಸೋಮವಾರ ಪ್ರದರ್ಶಿಸಲು ಆಯೋಜಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಕ್ಕಳ ಚಲನಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 8 ರಿಂದ 10 ಗಂಟೆಯ ನಡುವೆ ನಡೆಸಬೇಕು ಮತ್ತು ಪ್ರತಿ ವಿದ್ಯಾರ್ಥಿಯಿಂದ 10 ರೂ ಮಾತ್ರ ಪಡೆಯಬೇಕೆಂದು ನಿರ್ದೇಶನ ನೀಡಿದೆ.
ಮುದ್ದು ತೀರ್ಥಹಳ್ಳಿ ಎನ್ನುವ ಹುಡುಗಿಯೊಬ್ಬಳು ಬರೆದ ಕಾದಂಬರಿ ಆಧರಿಸಿದ ಚಿತ್ರ ಇದು. ಆಕೆ ಆರನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ನಂತರ ಕನ್ನಡ ಮಾಧ್ಯಮದಲ್ಲೇ ಓದಬೇಕೆಂದು ತೀರ್ಮಾನಿಸಿ ಹೆತ್ತವರ ಜೊತೆ ಜಗಳ ಮಾಡಿ ಏಳನೇ ತರಗತಿಯಿಂದ ಕನ್ನಡದಲ್ಲಿಯೇ ಓದುತ್ತಿದ್ದಾಳೆ. ತಾನು ತುಳಿದ ಹಾದಿ, ಅದರ ಅನುಭವಗಳನ್ನೆಲ್ಲ ಒಟ್ಟಾಗಿಸಿ ‘ಕಾಡ ಹಾದಿಯ ಹೂಗಳು’ ಎಂಬ ಕಾದಂಬರಿ ಬರೆದಿದ್ದಾಳೆ. ಅದೇ ಹೆಸರನ್ನು ಇಟ್ಟುಕೊಂಡು ಅವರು ಚಿತ್ರ ಮಾಡಿದ್ದಾರೆ.
‘ಕಲಿಕಾ ಭಾಷೆಯ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಪ್ರಬಲವಾದ ಸಂದೇಶವನ್ನು ಈ ಚಲನಚಿತ್ರ ನೀಡುತ್ತದೆ. ಕನ್ನಡ ಭಾಷೆಯಲ್ಲಿ, ಅಂದರೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅಭಿವ್ಯಕ್ತಿ ಶಕ್ತಿ, ಗ್ರಹಿಕೆ, ಮಾನವೀಯ ಗುಣ, ಅರಿಯುವ ಕುತೂಹಲ ಹಾಗೂ ಕ್ರಿಯಾಶೀಲತೆ ಚೆನ್ನಾಗಿರುತ್ತದೆ. ಅದೇ ಇಂಗ್ಲಿಷ್ ಮೋಹಕ್ಕೆ ಬಿದ್ದು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವ ಪೋಷಕರು ಮಕ್ಕಳ ಕ್ರಿಯಾಶೀಲತೆಯನ್ನು ಹೇಗೆ ಕೊಲೆ ಮಾಡುತ್ತಾರೆ, ಅಂತಹ ಮಕ್ಕಳ ವ್ಯಕ್ತಿತ್ವ ಹೇಗೆ ಕುಬ್ಜವಾಗುತ್ತ ಹೋಗುತ್ತದೆ ಎಂಬುದು ಚಿತ್ರದ ಕಥೆ. ಇದರಲ್ಲಿ ಮಕ್ಕಳಿಗೂ ಸಂದೇಶವಿದೆ. ಹಾಗೆಯೇ ದೊಡ್ಡವರಿಗೂ. ಶಿಶುನಾಳ ಷರೀಫರ ‘ಸಾಲಿಯ ನೋಡಿದಿರ ಸರ್ಕಾರದ ಸಾಲಿಯ ನೋಡಿದಿರ…’ ಹಾಡನ್ನು ಚಿತ್ರದಲ್ಲಿ ಬಳಸಿದ್ದು, ಸರ್ಕಾರಿ ಶಾಲೆಯ ಹಿರಿಮೆಯನ್ನು ಸಾರುತ್ತದೆ’ ಎಂದು ಶಿಕ್ಷಕ ಬಸವರಾಜ್ ತಿಳಿಸಿದರು.
‘ಕಾಡ ಹಾದಿಯ ಹೂಗಳು ಕೃತಿ ಕಾದಂಬರಿಯೂ ಹೌದು, ಅನುಭವ ಕಥನವೂ ಹೌದು, ಹಾಗೆಯೇ ಶೈಕ್ಷಣಿಕ ಪಠ್ಯಪುಸ್ತಕವೂ ಹೌದೆಂಬುದು ನನ್ನ ಖಚಿತ ನಿಲುವು. ಶಿಕ್ಷಕರಿಗೆ ಒಂದು ಮಾದರಿ ಕೈಪಿಡಿಯಾಗಬಹುದಾದ ಇದು ಮಕ್ಕಳಿಗೆ ಬುದ್ಧಿ, ಮನೋವಿಕಾಸದ ಕಥೆಯೂ ಆಗಿದೆ ಎಂದು ಮೆಚ್ಚದೆ ಹೋದರೆ ಜಿಪುಣತನವಾದೀತು’ ಎಂದು ಸಾಹಿತಿ ಸ.ರಘುನಾಥ ಅವರು ಪುಸ್ತಕ್ ಬೆನ್ನುಡಿಯಲ್ಲಿ ಬರೆದ ಮಾತುಗಳು ಚಲನಚಿತ್ರಕ್ಕೂ ಅನ್ವಯಿಸುತ್ತದೆ. ತಾಲ್ಲೂಕಿನ ಹಾರಡಿ, ಎಚ್.ಕ್ರಾಸ್, ಉರುಟ ಅಗ್ರಹಾರ, ಕನ್ನಮಂಗಲ, ಕುವೆಂಪು ಶಾಲೆ, ಕುಂಬಿಗಾನಹಳ್ಳಿ, ಕಾಳನಾಯಕನಹಳ್ಳಿ, ಯಣ್ಣೂರು, ಬೀಚಗೊಂಡಹಳ್ಳಿ ಮುಂತಾದ ಶಾಲಾ ಶಿಕ್ಷಕರು ಜೊತೆಗೂಡಿದ್ದು ತಮ್ಮ ಮಕ್ಕಳಿಗೆ ಹಾಗೂ ಪೋಷಕರಿಗೆ ಈ ಚಿತ್ರವನ್ನು ತೋರಿಸಲು ಉತ್ಸುಕರಾಗಿದ್ದಾರೆ. ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಈ ಮೂಲಕ ತಿಳಿಯಪಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ಹೇಳಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!